ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ವಿವಿಧ ಗ್ಯಾರಂಟಿ ಯೋಜನೆಗಳು ಬಹುಜನರಲ್ಲಿ ಬಹು ನಿರೀಕ್ಷೆ ಮೂಡಿಸಿದ್ದರೂ, ಇತ್ತೀಚೆಗೆ “ಗೃಹಲಕ್ಷ್ಮಿ” ಯೋಜನೆಯ ಹಣ ಸಮಯಕ್ಕೆ ಸಿಗುತ್ತಿಲ್ಲ ಎಂಬ ಆರೋಪಗಳು ಹೆಚ್ಚುತ್ತಿವೆ. ಈ ಮಧ್ಯೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಭಾರೀ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಆದೇಶ ಮಾಡಿದೆ.
ಆರ್ಥಿಕ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ:
- ಜಿಲ್ಲಾ ಪಂಚಾಯಿತಿಗಳಿಗೆ – ₹1.31 ಕೋಟಿ
- ತಾಲೂಕು ಪಂಚಾಯಿತಿಗಳಿಗೆ – ₹6.33 ಕೋಟಿ
- ಒಟ್ಟು – ₹7.65 ಕೋಟಿ
- ಈ ಹಣವನ್ನು ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹಾಗೂ ಸದಸ್ಯರ ಸಭಾ ಭತ್ಯೆ ರೂಪದಲ್ಲಿ, ಏಪ್ರಿಲ್ ರಿಂದ ಆಗಸ್ಟ್ ವರೆಗೆ ಹಾಗೂ ಮುಂದಿನ ಮೂರು ತಿಂಗಳ ಅಡ್ವಾನ್ಸ್ ಹಣವಾಗಿ ಬಿಡುಗಡೆ ಮಾಡಲಾಗಿದೆ.
ಅನುಷ್ಠಾನ ಸಮಿತಿಗಳ ಸದಸ್ಯರನ್ನಾಗಿ ಬಹುತೇಕವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರನ್ನೇ ನೇಮಕ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ವಿಚಾರದ ಬಗ್ಗೆ ಕಳೆದ ಅಧಿವೇಶನದಲ್ಲಿ ಸರ್ಕಾರ ಹಾಗೂ ವಿಪಕ್ಷಗಳ ಮಧ್ಯೆ ಭಾರೀ ಜಟಾಪಟಿ ನಡೆದಿತ್ತು. ಈ ಬೆನ್ನಲ್ಲೇ ಜಿ.ಪಂ, ತಾಪಂ.ಗಳಿಗೆ 7.65 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆರ್ಥಿಕ ಇಲಾಖೆ ಆದೇಶಿಸಿದೆ.














