ಮನೆ ರಾಜ್ಯ ಬೈಕಿಗೆ ಕಾರು ಡಿಕ್ಕಿ: ಹಿಂಬದಿ ಕುಳಿತಿದ್ದ ಯುವಕ ಸಾವು

ಬೈಕಿಗೆ ಕಾರು ಡಿಕ್ಕಿ: ಹಿಂಬದಿ ಕುಳಿತಿದ್ದ ಯುವಕ ಸಾವು

0

ಪಾಂಡವಪುರ:ತಾಲೂಕಿನ ಹಿರೇಮರಳಿ ಗೇಟ್ ಸಮೀಪದ ಇಟ್ಟಿಗೆಗೂಡಿನ ಮುಂಭಾಗದ ರಸ್ತೆ ಬದಿಯಲ್ಲಿ ನಿಂತಿದ್ದ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಯುವಕ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.


ತಾಲೂಕಿನ ದೊಡ್ಡಬ್ಯಾಡರಹಳ್ಳಿ ನಿವಾಸಿ ಕುಮಾರ್ ಅವರ ಪುತ್ರ ಡಿ.ಕೆ.ರವಿ ಮೃತ. (ಎಫ್‌ಐಆರ್‌ನಲ್ಲಿ ಮೃತನ ವಯಸ್ಸು ನಮೂದಿಸಿಲ್ಲ) ಮೃತನ ತಂದೆ ಕುಮಾರ ಮಗನನ್ನು ಕರೆದುಕೊಂಡು ಟೊಮ್ಯಾಟೋ ಸಸಿಗಳನ್ನು ತರಲು ತಾಲೂಕಿನ ಬನಘಟ್ಟ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ರಸ್ತೆ ಬದಿಗೆ ಬೈಕ್ ನಿಲ್ಲಿಸಿ ಮಗನನ್ನು ಬೈಕಿನ ಹಿಂಬದಿಯಲ್ಲಿ ಕೂರಿಸಿ ಮೂತ್ರ ವಿಸರ್ಜನೆಗೆಂದು ತೆರಳಿದ್ದ ವೇಳೆ ನಾಗಮಂಗಲದಿಂದ ಪಾಂಡವಪುರ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸಮೇತವಾಗಿ ಯುವಕನನ್ನು ಸುಮಾರು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಡಿಕ್ಕಿ ರಭಸಕ್ಕೆ ಯುವಕನ ತಲೆ, ಎದೆ ಭಾಗದಲ್ಲಿ ತೀವ್ರ ಗಾಯವಾಗಿದ್ದು, ತಕ್ಷಣ ಆತನನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ಕರದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸುವ ವೇಳೆ ಮಾರ್ಗಮಧ್ಯೆದಲ್ಲಿ ಕೊನೆಯುಸಿರಳೆದಿದ್ದಾನೆ.
ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಅಪಘಾತಕ್ಕೀಡಾದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.