ಮನೆ ಕಾನೂನು ಜಮೀನು ವಿಚಾರದಲ್ಲಿ ನಾಯಿ ಛೂ ಬಿಟ್ಟ ಪ್ರಕರಣ: ದಾಖಲೆ ಸಲ್ಲಿಸಲು ಹೈಕೋರ್ಟ್ ಸೂಚನೆ

ಜಮೀನು ವಿಚಾರದಲ್ಲಿ ನಾಯಿ ಛೂ ಬಿಟ್ಟ ಪ್ರಕರಣ: ದಾಖಲೆ ಸಲ್ಲಿಸಲು ಹೈಕೋರ್ಟ್ ಸೂಚನೆ

0

ಬೆಂಗಳೂರು: ಜಮೀನು ವಿಚಾರದಲ್ಲಿ ಉಂಟಾದ ವಾಗ್ವಾದದ ಬಳಿಕ ಸಹೋದರಿಯ ಮೇಲೆ ನಾಯಿ ಛೂ ಬಿಟ್ಟು ಜೀವ ಬೆದರಿಕೆ ಹಾಕಿರುವ ಆರೋಪದ ಕುರಿತು ವ್ಯಕ್ತಿ ಹಾಗೂ ಆತನ ಪತ್ನಿಯ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ದಾಖಲೆಗಳನ್ನು ಸಲ್ಲಿಸುವಂತೆ ಹಲಸೂರು ಪೊಲೀಸರಿಗೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.

Join Our Whatsapp Group

ಅಕ್ರಮ ಪ್ರತಿಬಂಧಕ ಹಾಗೂ ಜೀವ ಬೆದರಿಕೆ ಸಂಬಂಧ ತಮ್ಮ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಹಲಸೂರು ನಿವಾಸಿಗಳಾದ ಪುರುಷೋತ್ತಮ್ ಮತ್ತವರ ಪತ್ನಿ ಭಾಗ್ಯ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆಯಿತು.

ವಿಚಾರಣೆಗೆ ಅರ್ಜಿದಾರ ಪರ ವಕೀಲರು ಹಾಜರಾಗುತ್ತಿದ್ದಂತೆಯೇ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, “ನಿಮ್ಮ ಕಕ್ಷಿದಾರರೇಕೆ ದೂರುದಾರರ ಮೇಲೆ ನಾಯಿಯನ್ನು ಛೂ ಬಿಟ್ಟರು? ನಿಮ್ಮ ಸಮಸ್ಯೆ ಏನು” ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರು, “ಅದು ಸಾಕಿರುವ ನಾಯಿ. ಅದನ್ನು ಕಟ್ಟಿ ಹಾಕಲಾಗಿತ್ತು” ಎಂದು ಉತ್ತರಿಸಿದರು.

ಇದನ್ನು ಕೇಳಿ ಅಚ್ಚರಿಗೊಂಡ ನ್ಯಾಯಮೂರ್ತಿಗಳು, “ಸಾಕು ನಾಯಿನಾ? ಸಾಕಿದ ನಾಯಿ ಎಂದರೆ ಅದು ಕಚ್ಚುವುದಿಲ್ಲವೇ? ಕಟ್ಟಿರುವ ನಾಯಿಯನ್ನು ದೂರುದಾರರ ಮೇಲೆ ಏಕೆ ಛೂ ಬಿಟ್ಟರು? ಸಮಸ್ಯೆ ಇರುವುದೇ ದೂರುದಾರರನ್ನು ಅಕ್ರಮವಾಗಿ ಪ್ರತಿಬಂಧಿಸಿರುವ ವಿಚಾರದಲ್ಲಿ. ನಾಯಿಯನ್ನು ಛೂ ಬಿಟ್ಟು ದೂರುದಾರರನ್ನು ಎಲ್ಲಿಗೂ ಚಲಿಸಲು ಬಿಟ್ಟಿಲ್ಲ ಎನ್ನುವುದೇ ಪ್ರಕರಣವಾಗಿದೆ” ಎಂದರು.

ಅರ್ಜಿದಾರರ ಪರ ವಕೀಲರು ಉತ್ತರಿಸಿ, “ಅರ್ಜಿದಾರರ ಮೇಲೆ ದಾಖಲಿಸಿರುವುದು ಸುಳ್ಳು ದೂರು” ಎಂದರು. ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, “ನಾಯಿ ಸುಳ್ಳೇ ಅಥವಾ ದೂರು ಸುಳ್ಳೇ” ಎಂದು ತಕ್ಷಣವೇ ಮರು ಪ್ರಶ್ನಿಸಿದರು. ವಕೀಲರು, “ದೂರುದಾರರು ಮೊದಲ ಅರ್ಜಿದಾರರ ಸಹೋದರಿಯಾಗಿದ್ದಾರೆ” ಎಂದು ಸಮಜಾಯಿಷಿ ನೀಡಿದರು.

ಈ ವೇಳೆ ನ್ಯಾಯಮೂರ್ತಿಗಳು, “ಅದೆಲ್ಲವೂ ಸರಿ. ಮನೆಗೆ ಬಂದರೆ ನಾಯಿಯನ್ನು ಛೂ ಬಿಟ್ಟರೆ ಹೇಗೆ?” ಎಂದು ಕೇಳಿದರು. ಇದಕ್ಕೆ ವಕೀಲರು, “ದೂರುದಾರರು ತಾಯಿಯನ್ನು ನೋಡಲು ಅರ್ಜಿದಾರರ ಮನೆಗೆ ಬಂದರು. ಈ ವೇಳೆ ಆಸ್ತಿ ವಿಚಾರವಾಗಿ ಚರ್ಚೆ ನಡೆದಿದೆ. ಇಬ್ಬರ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ದೂರುದಾರರ ಹೇಳಿಕೆ ಹೊರತುಪಡಿಸಿ ತನಿಖೆಯಲ್ಲಿ ಮತ್ಯಾವುದೇ ದಾಖಲೆಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿಲ್ಲ. ಅರ್ಜಿದಾರರ ಮೇಲಿನ ಆರೋಪಗಳು ಸುಳ್ಳು” ಎಂದು ತಿಳಿಸಿದರು.

ಇದಕ್ಕೆ ಪೀಠ, “ಆಸ್ತಿ ವಿವಾದವಿದ್ದರೆ, ಆ ಸಮಸ್ಯೆ ಬಗೆಹರಿಸಲು ನಾಯಿಗೆ ಏಕೆ ಹೇಳಿದಿರಿ” ಎಂದು ಪ್ರಶ್ನಿಸಿತು. ಆಗ ವಕೀಲರು, “ಅದೆಲ್ಲಾ ಸುಳ್ಳು. ನಾಯಿ ಸುಮ್ಮನೆ ನಿಂತಿತ್ತು” ಎಂದು ಸಮಜಾಯಿಷಿ ನೀಡಿದರು. ನ್ಯಾಯಮೂರ್ತಿಗಳು, “ನಾಯಿ ಛೂ ಬಿಟ್ಟು ಹೆದರಿಸಿದ್ದಾರೆ ಎನ್ನುವುದು ಆರೋಪ. ಪ್ರಕರಣದಲ್ಲಿ ಅಕ್ರಮ ಪ್ರತಿಬಂಧಿಸಿದ ಅಪರಾಧ ಸ್ಪಷ್ಟವಾಗಿ ಅನ್ವಯಿಸುತ್ತದೆ. ನಾಯಿಯನ್ನು ಮೈ ಮೇಲೆ ಬಿಟ್ಟರೆ ದೂರುದಾರರು ಚಲಿಸಲು ಹೇಗೆ ಸಾಧ್ಯವಾಗುತ್ತದೆ” ಎಂದು ಪ್ರಶ್ನಿಸುತ್ತಾ “ಪ್ರಕರಣ ಕುರಿತು ಪೊಲೀಸರ ಪರ ಏನು ಹೇಳುತ್ತೀರಿ?” ಎಂದು ಸರ್ಕಾರಿ ವಕೀಲರನ್ನು ಕೇಳಿದರು.

ಸರ್ಕಾರಿ ವಕೀಲರು ಉತ್ತರಿಸಿ, “ಗಾಯದ ಪ್ರಮಾಣ ಪತ್ರವನ್ನು ಪಡೆಯಲಾಗುತ್ತಿದೆ. ಅರ್ಜಿದಾರರ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 326 ಅಡಿಯಲ್ಲಿ ಆರೋಪವಿದೆ” ಎಂದು ಹೇಳಿದರು.

ಇದರಿಂದ ಮತ್ತಷ್ಟು ಅಚ್ಚರಿಗೊಂಡ ನ್ಯಾಯಮೂರ್ತಿಗಳು, “ಏನು? ನಾಯಿಯಿಂದ ಗಾಯವಾಗಿದೆಯೇ? ಐಪಿಸಿ ಸೆಕ್ಷನ್ 326 ಅಡಿ ಪ್ರಕರಣ ಎಂದರೆ ಮಾರಕಾಸ್ತ್ರಗಳಿಂದ ಗಂಭೀರವಾಗಿ ಗಾಯಗೊಳಿಸಿರುವ ಅಪರಾಧ ಎಂದರ್ಥ. ನಾಯಿಯನ್ನು ಮೈ ಮೇಲೆ ಬಿಟ್ಟಿದ್ದಾರೆ ಎಂಬುದು ದೂರುದಾರ ಆರೋಪವಾಗಿದೆ” ಎಂದರು. ಸರ್ಕಾರದ ಪರ ವಕೀಲರು, “ಪ್ರಕರಣದ ತನಿಖೆಯ ದಾಖಲೆಗಳನ್ನು ಸಲ್ಲಿಸಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ನಗೆಗಡಲಲ್ಲಿ ತೇಲಿದರು.