ಮನೆ ಅಪರಾಧ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು: ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ...

ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು: ತಹಸೀಲ್ದಾರ್ ಸೇರಿದಂತೆ ಐವರ ವಿರುದ್ದ ಎಫ್’ಐಆರ್

0

ಮೈಸೂರು:  ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ ಆರೋಪದ ಮೇಲೆ ಮೈಸೂರು ತಾಲೂಕು ತಹಸೀಲ್ದಾರ್ ಸೇರಿದಂತೆ ಐವರ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಐವರ ವಿರುದ್ದ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.

ವಿಲೇಜ್ ಅಕೌಂಟೆಂಟ್ ನಾಗೇಶ್, ರೆವಿನ್ಯೂ ಇನ್ಸ್ಪೆಕ್ಟರ್, ತಹಸೀಲ್ದಾರ್, ಜಯಲಕ್ಷ್ಮೀಬಾಯಿ ಹಾಗೂ ಜಯಶ್ರೀ ಎಂಬುವರ ವಿರುದ್ದ ವಿಜಯನಗರ ನಿವಾಸಿ ಶ್ರೀಕಂಠಪ್ಪ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

ಮೈಸೂರು ಗ್ರಾಮ ಕಸಬಾ ಹೋಬಳಿ ಸರ್ವೆ ನಂ 155/2 ರಲ್ಲಿ 2.06 ಗುಂಟೆ ಎಕರೆ ಜಮೀ‌ನು ಖರಾಬು ಭೂಮಿಯಾಗಿದ್ದು 1975 ರಲ್ಲಿ ಆರ್.ವೆಂಕಟಪ್ಪ ಎಂಬುವರ ಹೆಸರಿನಲ್ಲಿ ಅನ್ಯಕ್ರಾಂತ ಮಂಜೂರಾಗಿದೆ. ತಿರುಮಲೈ ರೋಲರ್ ಪ್ಲೋರ್ ಮಿಲ್ ಪ್ರೈವೇಟ್ ಲಿಮಿಟೆಡ್ ನ ಅಧಿಕೃತ ನಿರ್ದೇಶಕರಾಗಿದ್ದ ನರಸಿಂಹಣ್ಣ ಅವರು ಆರ್.ವೆಂಕಟಪ್ಪ, ವೆಂಕಾರಾಮ್, ಕೃಷ್ಣ ರವರಿಂದ  1982 ರಂದು ಖರೀದಿ ಮಾಡಿ ಕ್ರಯಪತ್ರ ಮಾಡಿಸಿ ನೊಂದಣಿ ಮಾಡಿಸಿರುತ್ತಾರೆ. ಆದರೆ ನರಸಿಂಹಣ್ಣ ಅವರು ಮೂಲ ಕ್ರಯಪತ್ರ ಕಂಪನಿಗೆ ಒಪ್ಪಿಸಿಲ್ಲ.

ಸದರಿ ಜಮೀನಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ 19,47,400/- ರೂ ಪಾವತಿಸಿ ಏಕ ನಿವೇಶನ ಕೈಗಾರಿಕಾ ವಿನ್ಯಾಸ ನಕ್ಷೆ ಅನುಮೋದನೆ ಪಡೆದು ಅನುಮತಿ ಪಡೆಯಲಾಗಿದೆ. ಹೀಗಾಗಿ ಸದರಿ ಕಂಪನಿಯ ಭೂಮಿ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಆದರೂ ವಿ.ಎ. ನಾಗೇಶ್, ರಾಜಸ್ವ ನಿರೀಕ್ಷಕ ಹಾಗೂ ತಹಸೀಲ್ದಾರ್ ಸೇರಿಕೊಂಡು ದಾಖಲೆಗಳನ್ನ ಸೃಷ್ಟಿಸಿ ನರಸಿಂಹಣ್ಣ ಕುಟುಂಬಸ್ಥರಾದ ಜಯಲಕ್ಷ್ಮಿ ಭಾಯಿ, ಜಯಶ್ರೀ  ಅವರಿಗೆ ಪೌತಿ ಖಾತೆ ಮಾಡಿದ್ದಾರೆ.

ಕಾನೂನು ಬಾಹಿರವಾಗಿ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಸಂಚು ರೂಪಿಸಿರುವ ವಿ.ಎ.ನಾಗೇಶ್, ಆರ್.ಐ, ತಹಸೀಲ್ದಾರ್, ಜಯಲಕ್ಷ್ಮೀಭಾಯಿ, ಜಯಶ್ರೀ  ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಶ್ರೀಕಂಠಪ್ಪ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಂದ ಜೀವಭಯ ಇದ್ದು ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಸಮರಸದ ಬದುಕಿಗೆ ಬೇಕು ಹೊಂದಾಣಿಕೆ
ಮುಂದಿನ ಲೇಖನಮೆಕ್ಕೆಜೋಳ ಸೇವಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನ