ಮನೆ ಮನರಂಜನೆ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ವಿವಾದಾತ್ಮಕ ಟ್ವೀಟ್: ಆರ್ ಜಿವಿ ವಿರುದ್ಧ ದೂರು ದಾಖಲಿಸಿದ...

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಗ್ಗೆ ವಿವಾದಾತ್ಮಕ ಟ್ವೀಟ್: ಆರ್ ಜಿವಿ ವಿರುದ್ಧ ದೂರು ದಾಖಲಿಸಿದ ಬಿಜೆಪಿ

0

ಮುಂಬೈ(Mumbai): ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ  ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದ ಬಹುಭಾಷಾ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮ ವಿರುದ್ಧ ತೆಲಂಗಾಣದಲ್ಲಿ ಬಿಜೆಪಿ ದೂರು ದಾಖಲಿಸಿದೆ.

ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ವರ್ಮ, ದ್ರೌಪದಿಯವರು ರಾಷ್ಟ್ರಪತಿಯಾದರೆ ಪಾಂಡವರು ಮತ್ತು ಕೌರವರು ಯಾರು ಎಂದು ಕೇಳಿದ್ದರು. 

ಈ ಟ್ವೀಟ್ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇನ್ನು ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ ನಂದೇಶ್ವರ್ ಗೌಡ ಒಂದು ಹೆಜ್ಜೆ ಮುಂದೆ ಹೋಗಿ ಹೈದರಾಬಾದ್ ನ ಅಬಿಡ್‌ ರೋಡ್‌ ಪೊಲೀಸ್ ಠಾಣೆಯಲ್ಲಿ ವರ್ಮ ವಿರುದ್ಧ ದೂರು ಕೂಡ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಅಬಿಡ್‌ ರೋಡ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಬಿ.ಪ್ರಸಾದ್ ರಾವ್ ಪ್ರತಿಕ್ರಿಯಿಸಿ, ‘ನಾವು ದೂರು ಸ್ವೀಕರಿಸಿದ್ದು, ಕಾನೂನಿನ ಅಭಿಪ್ರಾಯ ಕೇಳಿದ್ದೇವೆ. ಕಾನೂನು ಅಭಿಪ್ರಾಯ ಸ್ವೀಕರಿಸಿದ ಬಳಿಕ ವರ್ಮಾ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ’ ಎಂದು ತಿಳಿಸಿದ್ದಾರೆ.

ರಾಮ್ ಗೋಪಾಲ್ ವರ್ಮ ಸ್ಪಷ್ಟನೆ:

ತಮ್ಮ ಟ್ವೀಟ್ ವಿವಾದವಾಗಿ ದೂರು ದಾಖಲಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ರಾಮ್ ಗೋಪಾಲ್ ವರ್ಮ, ಇದನ್ನು ನಾನು ಕೇವಲ ವ್ಯಂಗ್ಯವಾಗಿ ಹೇಳಿದೆಯಷ್ಟೆ, ಅದು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನ್ನ ಅಚ್ಚುಮೆಚ್ಚಿನ ಪಾತ್ರವಾಗಿದ್ದು, ಈಗ ರಾಷ್ಟ್ರಪತಿ ಅಭ್ಯರ್ಥಿಯಾಗಿರುವವರ ಹೆಸರು ಅಪರೂಪದ್ದಾಗಿರುವುದರಿಂದ ಅವರ ಹೆಸರನ್ನು ಮಹಾಭಾರತದ ದ್ರೌಪದಿ ಪಾತ್ರಕ್ಕೆ ಹೋಲಿಸಿ ಟ್ವೀಟ್ ಮಾಡಿದೆ ಅಷ್ಟೆ, ಅದು ಬಿಟ್ಟರೆ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದಿದ್ದಾರೆ.

ಹಿಂದಿನ ಲೇಖನಕೊರೊನಾ: ದೇಶದಲ್ಲಿಂದು 15,940 ಹೊಸ ಕೇಸ್ ಪತ್ತೆ
ಮುಂದಿನ ಲೇಖನಮಡಿಕೇರಿಯಲ್ಲಿ ಭೂಮಿ ಕಂಪಿಸಿದ ಅನುಭವ