ಕೋಲ್ಕತ್ತಾ : ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಬಂಗಾಳದಲ್ಲಿ ರಾಜಕೀಯ ಕೋಲಾಹಲ ಎಬ್ಬಿಸಿದ್ದು, ಉದ್ವಿಗ್ನತೆಗೂ ಕಾರಣವಾಗಿದೆ. ಸದ್ಯ 2 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಸುವೇಂದು ಸಿಎಂ ಹುದ್ದೆಯ ರೇಸ್ನಲ್ಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುವೇಂದು ಅಧಿಕಾರಿ, ಇದು ʻಕೋಲ್ಡ್ ಬ್ಲಡ್ ಮರ್ಡರ್ʼ ಅಂತ ಕರೆದಿದ್ದಾರೆ. ಅಲ್ಲದೇ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಕೊಲೆಗಾರರು ದಾಳಿ ನಡೆಸುವುದಕ್ಕೂ ಮುನ್ನ ವಿಚಕ್ಷಣ ನಡೆಸಿದ್ದರೆಂದೂ ಆರೋಪಿಸಿದ್ದಾರೆ.
ಈ ಘಟನೆ ನಿಜಕ್ಕೂ ಹೃದಯ ವಿದ್ರಾವಕ, ʻಕೋಲ್ಡ್ ಬ್ಲಡ್ ಮರ್ಡರ್ʼ ನಾವು ಇದನ್ನ ಬಲವಾಗಿ ಖಂಡಿಸುತ್ತೇವೆ. ಪ್ರಕರಣವನ್ನ ಸಮಗ್ರವಾಗಿ ತನಿಖೆ ಮಾಡಲಾಗುವುದು. ದಾಳಿಕೋರರು ಗುಂಡು ಹಾರಿಸಿದ ರೀತಿ ನೋಡಿದ್ರೆ, ಮೊದಲೇ ಒಂದು ರಾತ್ರಿ ವೀಕ್ಷಣೆ ನಡೆಸಿದ್ದಾರೆ ಅನ್ನೋದು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.
ಸುವೇಂದು ಅಧಿಕಾರಿ, ಉದ್ವಿಗ್ನತೆಗೆ ಅವಕಾಶ ಕೊಡದಂತೆ ಶಾಂತಿ ಕಾಪಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ತನಿಖೆ ಆಗೋವರೆಗೆ ಯಾರೊಬ್ಬರೂ ಕಾನೂನು ಕೈಗೆ ತೆಗೆದುಕೊಳ್ಳೋದು ಬೇಡ ಅಂತ ಕರೆ ನೀಡಿದ್ದಾರೆ. ಮೋಟಾರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ರಾತ್ರಿ 10:30 ರ ಸುಮಾರಿಗೆ ಮಧ್ಯಗ್ರಾಮ್ನ ಡೋಲ್ತಾಲಾ ಗ್ರಾಮದ ಬಳಿ ಅವರ ವಾಹನವನ್ನು ತಡೆದು ಚಂದ್ರನಾಥ್ ರಥ ಅವರ ಮೇಲೆ ಪಾಯಿಂಟ್ ಬ್ಲಾಕ್ನಲ್ಲಿ ಗುಂಡುಹಾರಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.















