ಭಾರತದಲ್ಲಿ ಪ್ರತಿ 7 ನಿಮಿಷಗಳಿಗೆ ಓರ್ವ ಮಹಿಳೆ ತನ್ನ ಜೀವವನ್ನು ಗರ್ಭಕಂಠದ ಕ್ಯಾನ್ಸರ್ಗೆ ಬಲಿ ಕೊಡುತ್ತಿದ್ದಾಳೆ. ಅದನ್ನು ಬಹುಪಾಲು ತಡೆಯಬಹುದೆಂದು ತಿಳಿದು ಎಂಎಸ್ಡಿ ಭಾರತದಲ್ಲಿ ತನ್ನ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಅಭಿಯಾನವನ್ನು ಶುರು ಮಾಡಿದೆ. ಬಾಲಿವುಡ್ನ ಜನಪ್ರಿಯ ನಟಿ ಮಾಧುರಿ ದೀಕ್ಷಿತ್ ಅವರ ಈ ಅಭಿಯಾನವನ್ನು ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ ಎನ್ನಲಾಗಿದೆ.
ಈ ಅಭಿಯಾನದ ಕುರಿತು ಉದ್ದೇಶ ಮಹಿಳೆಯರ ಆರೋಗ್ಯದ ಕುರಿತು ನಡೆಯುವ ಚರ್ಚೆಗಳನ್ನು ಮುಂದಕ್ಕೆ ತರುವುದು ಮತ್ತು ದೇಶಾದ್ಯಂತ ಮಹಿಳೆಯರು ಮತ್ತು ಪೋಷಕರು ಸರ್ವೈಕಲ್ ಕ್ಯಾನ್ಸರ್ ಮತ್ತು ಅದರ ಸೂಕ್ತ ನಿರೋಧಾತ್ಮಕ ಆರೋಗ್ಯ ಆಯ್ಕೆಗಳ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡಲು ಪ್ರೋತ್ಸಾಹಿಸುವುದಾಗಿದೆ. ಅಭಿಯಾನದ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ”ಮಹಿಳೆಯರು ಎಲ್ಲರನ್ನೂ ನೋಡಿಕೊಳ್ಳುತ್ತಾರೆ. ಆದ್ರೆ ಹಲವು ಬಾರಿ ತಮ್ಮ ಸ್ವಂತ ಆರೋಗ್ಯವನ್ನು ಕೊನೆಯಲ್ಲಿಡುತ್ತಾರೆ. ಮಹಿಳೆಯರ ಆರೋಗ್ಯಕ್ಕೆ ಗಮನ, ಆದ್ಯತೆ ಮತ್ತು ಸಂಭಾಷಣೆಗಳ ಅಗತ್ಯವಿದೆ. ಸರ್ವೈಕಲ್ ಕ್ಯಾನ್ಸರ್ ವಿಷಯಕ್ಕೆ ಬಂದರೆ ಅಲ್ಲಿ ಜಾಗೃತಿ ಮತ್ತು ಮಾಹಿತಿ ಆಧಾರಿತ ಚರ್ಚೆಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ ಎನ್ನಬಹುದು.
ಈ ಉಪಕ್ರಮದ ಮೂಲಕ, ಇನ್ನಷ್ಟು ಮಹಿಳೆಯರು ಮತ್ತು ಕುಟುಂಬಗಳು ಗರ್ಭಕಂಠದ ಕ್ಯಾನ್ಸರ್ ಹಾಗೂ ಅದರ ಸೂಕ್ತ ನಿರೋಧಾತ್ಮಕ ಆರೋಗ್ಯ ಸೇವೆಗಳ ಬಗ್ಗೆ ತಮ್ಮ ವೈದ್ಯರೊಂದಿಗೆ ಮಾತನಾಡಲು ಆತ್ಮವಿಶ್ವಾಸ ಹೊಂದುವರೆಂದು ನಾನು ಆಶಿಸುತ್ತೇನೆ. ವೈದ್ಯರೊಂದಿಗೆ ಮಾತನಾಡುವುದು ಸ್ವಯಂ ಆರೈಕೆಯ ಒಂದು ಭಾಗವಾಗಿದ್ದು, ಅದನ್ನು ಯಾವತ್ತೂ ಮುಂದೂಡಬಾರದು” ಎಂದು ತಿಳಿಸಿದರು. ”ಈ ಅಭಿಯಾನದ ಮೂಲಕ ಎಂಎಸ್ಡಿಯು ತಡೆಗಟ್ಟುವಿಕೆ, ಶಿಕ್ಷಣ ಮತ್ತು ಮಾಹಿತಿ ಆಧಾರಿತ ನಿರ್ಧಾರಗಳ ಮೇಲೆ ಕೇಂದ್ರೀಕೃತವಾಗಿರುವ ವ್ಯಾಪಕ ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗೆ ಕೊಡುಗೆ ನೀಡಲು ಉದ್ದೇಶಿಸಿದೆ. ಸಮಯಕ್ಕೆ ಸರಿಯಾದ ಸಂಭಾಷಣೆಗಳನ್ನು ಉತ್ತೇಜಿಸುವುದು ಮತ್ತು ಜಾಗೃತಿ ಹೆಚ್ಚಿಸುವುದರ ಮೂಲಕ ಈ ಉಪಕ್ರಮವು ಭಾರತದೆಲ್ಲೆಡೆ ಮಹಿಳೆಯರು ಮತ್ತು ಕುಟುಂಬಗಳಿಗಾಗಿ ಆರೋಗ್ಯಕರ ಭವಿಷ್ಯವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ” ಎಂದು ನಟಿ ಮಾಧುರಿ ದೀಕ್ಷಿತ್ ಮಾಹಿತಿ ನೀಡಿದರು. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯುವುದು ಮತ್ತು ಸರಿಯಾದ ನಿರೋಧಾತ್ಮಕ ಕ್ರಮಗಳನ್ನು ಅನುಸರಿಸುವುದರಿಂದ ಈ ರೋಗವನ್ನು ಬಹುಪಾಲು ತಡೆಯಬಹುದು.
ಆದರೂ ಭಾರತದಲ್ಲಿ ಪ್ರತೀ ಏಳು ನಿಮಿಷಕ್ಕೊಮ್ಮೆ ಓರ್ವ ಮಹಿಳೆ ಸಾವನ್ನಪ್ಪುತ್ತಾಳೆ. ಅಂದರೆ ಪ್ರತಿದಿನ ಸುಮಾರು 200 ಸಾವುಗಳು ಸಂಭವಿಸುತ್ತವೆ (ಗ್ಲೋಬೋಕ್ಯಾನ್ ಹೆಚ್ಪಿವಿ ಇಂಡಿಯಾ ವರದಿ 2023ರ ಮಾಹಿತಿ). ಈ ಅಭಿಯಾನವು ವಿಶೇಷವಾಗಿ ಮಹಿಳೆಯರಲ್ಲಿ ಇರುವ ಜಾಗೃತಿಯ ಕೊರತೆ ಮತ್ತು ನಿರೋಧಾತ್ಮಕ ಆರೋಗ್ಯ ಸೇವೆಯನ್ನು ತಡಮಾಡುವ ಪ್ರವೃತ್ತಿ ಎಂಬ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಉದ್ದೇಶಿಸಿದೆ. ಈ ಉಪಕ್ರಮದ ಭಾಗವಾಗಿ, ಮಾಧುರಿ ದೀಕ್ಷಿತ್ ಅವರನ್ನು ಒಳಗೊಂಡಿರುವ ಚಿಕ್ಕ ಡಿಜಿಟಲ್ ಚಲನಚಿತ್ರಗಳ ಸರಣಿಯನ್ನು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸರಳವಾಗಿ ಅರ್ಥವಾಗುವ ಮತ್ತು ಮಾಹಿತಿಪೂರ್ಣ ಸಂದೇಶಗಳ ಮೂಲಕ ಈ ಚಲನಚಿತ್ರಗಳು ಸರ್ವೈಕಲ್ ಕ್ಯಾನ್ಸರ್ ಕುರಿತು ಪ್ರಮುಖ ಮಾಹಿತಿಗಳನ್ನು ನೀಡುತ್ತದೆ. ಆರೋಗ್ಯ ತಜ್ಞರ ಮಾರ್ಗದರ್ಶನ ಪಡೆಯುವ ಅಗತ್ಯವನ್ನು ಒತ್ತಿ ಹೇಳುತ್ತವೆ. ಈ ಚಲನಚಿತ್ರಗಳು ಮಹಿಳೆಯರು ಮತ್ತು ಪೋಷಕರು ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟುವಿಕೆ ಕುರಿತು ಗೈನಕಾಲಜಿಸ್ಟ್ಗಳು ಮತ್ತು ಪೀಡಿಯಾಟ್ರಿಷಿಯನ್ಗಳೊಂದಿಗೆ ಮಾತನಾಡುವುದಕ್ಕೆ ಆದ್ಯತೆ ನೀಡಲು ಪ್ರೇರೇಪಿಸುತ್ತವೆ ಮತ್ತು ಆರೋಗ್ಯ ತಜ್ಞರೊಂದಿಗೆ ಜಾಗೃತಿಯಿಂದ ಹಾಗೂ ಸರಿಯಾದ ಮಾಹಿತಿಯ ಆಧಾರದ ಮೇಲೆ ಚರ್ಚೆ ನಡೆಸುವ ಮಹತ್ವವನ್ನು ಬಲಪಡಿಸುತ್ತವೆ.
ಈ ಉಪಕ್ರಮವು ವ್ಯಕ್ತಿಗಳು ಮತ್ತು ಕುಟುಂಬಗಳು ಒಂದು ವಿಷಯವನ್ನು ಆಲೋಚಿಸಲು ಪ್ರೇರೇಪಿಸುತ್ತದೆ — ಪ್ರಭಾವಿ ನಿರೋಧಾತ್ಮಕ ಆಯ್ಕೆಗಳು ಲಭ್ಯವಿದ್ದರೂ, ಆರೋಗ್ಯ ಸಂಬಂಧಿತ ನಿರ್ಧಾರಗಳನ್ನು ಹಲವಾರು ಬಾರಿ ಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಮುಂದೂಡಲಾಗುತ್ತದೆ. ಈ ಅಭಿಯಾನವು ಸರ್ವೈಕಲ್ ಕ್ಯಾನ್ಸರ್ ತಡವಾಗಿ ಪತ್ತೆಯಾಗುವ ರೋಗವಾಗಬಾರದು ಎಂಬುದನ್ನು ತಿಳಿಸಲಿದೆ. ಈ ಉಪಕ್ರಮದ ಕುರಿತು ಮಾತನಾಡಿದ ಎಂಎಸ್ಡಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬ್ರೆಕ್ಟ್ ವ್ಯಾನ್ನೆಸ್ಟೆ, ಸರ್ವೈಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಸಾರ್ವಜನಿಕ ಆರೋಗ್ಯದ ಪ್ರಮುಖ ಆದ್ಯತೆಯಾಗಿದೆ. ಹೆಚ್ಪಿವಿ ಮತ್ತು ನಿರೋಧಾತ್ಮಕ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಹೆಚ್ಚಿಸಿದರೆ ಮಹಿಳೆಯರ ದೀರ್ಘಕಾಲಿಕ ಆರೋಗ್ಯ ಫಲಿತಾಂಶಗಳಲ್ಲಿ ಮಹತ್ವದ ಸುಧಾರಣೆ ಸಾಧ್ಯ. ಎಂಎಸ್ಡಿಯಲ್ಲಿ, ಮಾಹಿತಿ ಆಧಾರಿತ ಸಂಭಾಷಣೆಗಳನ್ನು ಉತ್ತೇಜಿಸುವ ಮತ್ತು ಮಹಿಳೆಯರು ತಮ್ಮ ಆರೋಗ್ಯವನ್ನು ರಕ್ಷಿಸಲು ಮುಂಚಿತವಾಗಿ ಕ್ರಮ ಕೈಗೊಳ್ಳುವಂತೆ ಸಬಲಗೊಳಿಸುವ ಉಪಕ್ರಮಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದೆ.















