ಮನೆ ರಾಜ್ಯ ಮೈಸೂರಿನ ರಂಗಾಯಣದಲ್ಲಿ ಶಾಂತಿ ಕದಡುವ ಕೆಲಸ: ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ತೀರ್ಮಾನ

ಮೈಸೂರಿನ ರಂಗಾಯಣದಲ್ಲಿ ಶಾಂತಿ ಕದಡುವ ಕೆಲಸ: ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ತೀರ್ಮಾನ

0

ಮೈಸೂರು(Mysuru): ರಂಗಾಯಣದ ಮೂಲಕ ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.

ಇಂದು ಕಾಂಗ್ರೆಸ್ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತಿ ಎಸ್ ಎಲ್. ಬೈರಪ್ಪ ಹಾಗೂ ಮಾಸ್ಟರ್ ಮೈಂಡ್ ಪ್ರತಾಪ್ ಸಿಂಹ ಅವರನ್ನು ಮುಂದಿಟ್ಟುಕೊಂಡು ಶಾಂತಿ ಕದಡುವ ಕೆಲಸವನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ, ಶೀಘ್ರವೇ ಮೈಸೂರಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ 10000 ಜನ ಸೇರಿಸಿ ಮುಂದಿನ ವಾರ ಬೃಹತ್ ಪ್ರತಿಭಟನೆಯನ್ನ ನಡೆಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಮೈಸೂರು ರಂಗಾಯಣದಲ್ಲಿ ಪ್ರದರ್ಶನಗೊಂಡ ಸಾಂಬಾ ಶಿವ ಪ್ರಹಸನ ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ. ಶಿವಕುಮಾರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಖಂಡನೀಯ ಎಂದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರೌಡಿ ರೀತಿ ವರ್ತನೆ ಮಾಡುತ್ತಿದ್ದು, ಅವರು ಟಿಪ್ಪು ನಿಜ ಕನಸುಗಳು ನಾಟಕದ ಮೂಲಕ ಶಾಂತಿ ಕದಡಲು ಯತ್ನಿಸಿದರು. ಈಗ ಸಾಂಬಾ ಶಿವ ಪ್ರಹಸನ ನಾಟಕದ ಮೂಲಕ ಕಾಂಗ್ರೆಸ್ ನಾಯಕರನ್ನು ಅವಹೇಳನ ಮಾಡಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಂಚಮಸಾಲಿ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ನಿಗದಿ ಮಾಡಿರುವ ಸರ್ಕಾರದ ನಿರ್ಧಾರ ಚುನಾವಣಾ ಗಿಮಿಕ್ಸ್. ಈ ಎರಡು ಸಮುದಾಯಗಳಿಗೆ ನೀಡಿರುವ ಮಿಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಮಾಡಲಾಗಿದೆ. ಮೀಸಲಾತಿ ನೀಡುವ ಸರ್ಕಾರದ ನಿಲುವು ನ್ಯಾಯಾಲಯದಲ್ಲಿ ಊರ್ಜಿತವಾಗುವುದಿಲ್ಲ ಮೀಸಲಾತಿ ಪ್ರಮಾಣ ಶೇಕಡಾ 50 ರಷ್ಟು ಮೀರಲು ಸಾಧ್ಯವಿಲ್ಲ. ಏನೇ ಆದರೂ ಕಾಂಗ್ರೆಸ್ ಪಕ್ಷವನ್ನು ದೂರುತ್ತಾರೆ ಎಂದು ಆರೋಪಿಸಿದರು.

ಅಮುಲ್ ಜೊತೆ ಕೆ ಎಂ ಎಫ್ ವಿಲೀನ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಅಮಿತ್ ಶಾ ನೇತೃತ್ವದಲ್ಲಿ ಅಸ್ಸೋಂನಲ್ಲಿ ನಡೆದ ಸಭೆಯಲ್ಲಿ ದೇಶದ ನಾಲ್ಕು ಪ್ರಮುಖ ಹಾಲು ಒಕ್ಕೂಟಗಳನ್ನ ವಿಲೀನ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ರಾಜ್ಯದ ಬಿಜೆಪಿ ನಾಯಕರು ವಿಲೀನ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಕೆ ಎಂ ಎಫ್ ಅನ್ನು ಅದಾನಿ ಅಥವಾ ಅಂಬಾನಿ ಒಡೆತನಕ್ಕೆ ಕೊಡಲು ಹುನ್ನಾರ ನಡೆದಿದೆ. ಇದರ ಬಗ್ಗೆ ಪ್ರಶ್ನೆ ಮಾಡಲು ರಾಜ್ಯ ನಾಯಕರು ಧೈರ್ಯ ತೋರಬೇಕು ಎಂದು ಒತ್ತಾಯಿಸಿದರು.

ಹಿಂದಿನ ಲೇಖನಸಾಧ್ಯತೆಯಿಂದ ಸಾಧನೆಯೆಡೆಗೆ
ಮುಂದಿನ ಲೇಖನಎಲ್ಲ ಮತಾಂತರಗಳು ಅಕ್ರಮವಲ್ಲ: ಮಧ್ಯಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ