ಮನೆ ಸುದ್ದಿ ಜಾಲ ವರ್ಗಾವಣೆ ನೋವಿಗೆ ಕಂದಾಯ ಅಧಿಕಾರಿ ಬಲಿ? ಡೆತ್ ನೋಟ್‌ನಲ್ಲಿ ಪತ್ನಿ-ಮಗಳಿಗೆ ಭಾವನಾತ್ಮಕ ಸಂದೇಶ

ವರ್ಗಾವಣೆ ನೋವಿಗೆ ಕಂದಾಯ ಅಧಿಕಾರಿ ಬಲಿ? ಡೆತ್ ನೋಟ್‌ನಲ್ಲಿ ಪತ್ನಿ-ಮಗಳಿಗೆ ಭಾವನಾತ್ಮಕ ಸಂದೇಶ

0

ಹಾಸನ: ಕಂದಾಯ ಇಲಾಖೆಯ ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕುಟುಂಬದಿಂದ ದೂರವಿದ್ದ ನೋವು ಹಾಗೂ ವರ್ಗಾವಣೆ ಸಂಬಂಧದ ಮಾನಸಿಕ ಒತ್ತಡವೇ ಸಾವಿಗೆ ಕಾರಣವಾಗಿರಬಹುದು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಮೃತರನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆ ಮೂಲದ ತಿಮ್ಮಯ್ಯ ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಹಾಸನ ತಾಲ್ಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಾಹಿತಿ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ತಿಮ್ಮಯ್ಯ ಅವರನ್ನು ಸಾಲಿಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯ ನಂತರ ಕುಟುಂಬದಿಂದ ದೂರವಿದ್ದು ಕೆಲಸ ನಿರ್ವಹಿಸುತ್ತಿದ್ದ ಅವರು ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಪತ್ನಿ ಮತ್ತು ಮಕ್ಕಳೊಂದಿಗೆ ಒಂದೇ ಸ್ಥಳದಲ್ಲಿ ವಾಸಿಸುವ ಉದ್ದೇಶದಿಂದ ಮತ್ತೆ ವರ್ಗಾವಣೆ ಪಡೆಯಲು ಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇದರಿಂದ ಅವರು ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಈ ಹಿನ್ನೆಲೆ ಹಾಸನದ ಖಾಸಗಿ ಲಾಡ್ಜ್ ಒಂದಕ್ಕೆ ತೆರಳಿದ್ದ ತಿಮ್ಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಸ್ಥಳದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.

ಡೆತ್ ನೋಟ್‌ನಲ್ಲಿ ಪತ್ನಿ ಹಾಗೂ ಮಗಳ ಹೆಸರನ್ನು ಉಲ್ಲೇಖಿಸಿರುವ ಅವರು, “ನಿಮ್ಮನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಒಳ್ಳೆಯ ಗಂಡ ಹಾಗೂ ತಂದೆಯಾಗಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ. ಮುಂದಿನ ದಿನಗಳಲ್ಲಿ ನೀವು ಚೆನ್ನಾಗಿ ಬದುಕಬೇಕು” ಎಂದು ಭಾವನಾತ್ಮಕವಾಗಿ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡೆತ್ ನೋಟ್ ಸೇರಿದಂತೆ ಇತರ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಸಿದ್ದು, ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.