ಬೆಂಗಳೂರು: ಈಗಲ್ಟನ್ ರೆಸಾರ್ಟ್ನ ವಿಲ್ಲಾದಲ್ಲಿ ಸೋಮವಾರ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದು, ಮನೆ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ ಜೋಗೀಂದರ್ ಯಾದವ್(23) ಬಂಧಿತ ಆರೋಪಿಯಾಗಿರುವುದು ವಿಪರ್ಯಾಸ.
ಮತ್ತೊಬ್ಬ ಆರೋಪಿ, ಬಂಧಿತನ ಸಂಬಂಧಿ ರವೀಂದ್ರ ಯಾದವ್ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇಂಡಿಯನ್ ಏರ್ಫೋರ್ಸ್ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ರಘುರಾಜನ್ ಐದು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದು, ಪತ್ನಿ ಆಶಾ ಜತೆ ಈಗಲ್ಟನ್ ರೆಸಾರ್ಟ್ನ ವಿಲ್ಲಾದಲ್ಲಿ ವಾಸವಿದ್ದರು. ಈ ದಂಪತಿ ಪುತ್ರ ಮತ್ತು ಪುತ್ರಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ಇವರಿಬ್ಬರೇ ಮನೆಯಲ್ಲಿದ್ದರು. ಮನೆಗೆಲಸ ಹಾಗೂ ನಾಯಿ ನೋಡಿಕೊಳ್ಳಲು ಬಿಹಾರ ಮೂಲದ ಜೋಗಿಂದರ್ ಯಾದವ್ನನ್ನು ನಿಯೋಜಿಸಿಕೊಂಡಿದ್ದರು. ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ದಂಪತಿ ಕರೆ ಸ್ವೀಕರಿಸದಿದ್ದಾಗ ಪುತ್ರ ಅನುಮಾನಗೊಂಡು, ರೆಸಾರ್ಟ್ನ ಸೆಕ್ಯೂರಿಟಿ ಗಾರ್ಡ್ನನ್ನು ಸಂಪರ್ಕಿಸಿ ಮನೆಗೆ ಹೋಗಿ ಬರುವಂತೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಹಣದಾಸೆಗಾಗಿ ಕೊಲೆ: ಮೂರು ವರ್ಷದ ಹಿಂದೆ ರಾಜನ್ರ ಮನೆಯಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ ಆರೋಪಿ, ಹಣದಾಸೆಗಾಗಿ ವೃದ್ಧ ದಂಪತಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ತಿಂಗಳ ಹಿಂದೆ ಕೆಲಸದ ವೇಳೆ ಆರೋಪಿಯು ರಾಜನ್ರಿಗೆ ಗೊತ್ತಾಗದಂತೆ ಅವರ ಮೊಬೈಲ್ ಬಳಸಿ ಅವರ ಗೂಗಲ್ ಪೇ ಖಾತೆಯಿಂದ ತನ್ನ ಸ್ನೇಹಿತನ ಖಾತೆಗೆ 70 ಸಾವಿರ ಹಣ ವರ್ಗಾಯಿಸಿಕೊಂಡಿದ್ದ. ರಾಜನ್ ದಂಪತಿ ಖಾತೆಯಲ್ಲಿ ಭಾರಿ ಹಣ ಇರಬಹುದು ಎಂಬ ನಿರ್ಧಾರಕ್ಕೆ ಬಂದ ಆರೋಪಿ ಆ ಹಣ ಲಪಟಾಯಿಸುವ ಸಲುವಾಗಿ ಸ್ನೇಹಿತನ ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲ ಬಾರಿ ರಾಜನ್ ಮೊಬೈಲ್ನಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ವೇಳೆ ಯಾವುದೇ ಪಾರ್ಸ್ವರ್ಡ್ ಕೇಳಿರಲಿಲ್ಲ. ಕೇವಲ ಒಟಿಪಿ ಆಧರಿಸಿ ಹಣ ವರ್ಗಾವಣೆ ಆಗಿತ್ತು. ಹೀಗಾಗಿ ಈ ಬಾರಿಯೂ ಅಷ್ಟೇ ಸುಲಭವಾಗಿ ಹಣ ಕಳುಹಿಸಿಕೊಳ್ಳಬಹುದು ಎಂಬುದು ಆರೋಪಿಗಳ ಅಂದಾಜಾಗಿತ್ತು. ಆದರೆ ಈ ಬಾರಿ ಪಾಸ್ವರ್ಡ್ ಬದಲಾಗಿದ್ದು, ಆ್ಯಪ್ ಲಾಕ್ ಆದ ಕಾರಣಕ್ಕೆ ಆನ್ಲೈನ್ ಮೂಲಕ ಹಣ ವರ್ಗಾವಣೆ ಸಾಧ್ಯವಾಗಲಿಲ್ಲ. ಕಡೆಗೆ ಮನೆಯಲ್ಲಿದ್ದ ಒಡವೆಗಳನ್ನು ಗಂಟು ಕಟ್ಟಿಟ್ಟುಕೊಂಡಿದ್ದ ಆರೋಪಿ ಅದರ ಜೊತೆ ಪರಾರಿ ಆಗಲು ಯೋಜಿಸಿದ್ದ. ಆದರೆ ಕಡೆಯ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಮನೆಗೆ ಬಂದ ಕಾರಣಕ್ಕೆ ಗಾಬರಿಯಲ್ಲಿ ಒಡವೆ ಗಂಟು ಅಲ್ಲಿಯೇ ಬಿಟ್ಟು 50 ಸಾವಿರ ನಗದು ಜೊತೆ ಅಲ್ಲಿಂದ ಪರಾರಿ ಆಗಿದ್ದಾನೆ.