ಮನೆ ಸುದ್ದಿ ಜಾಲ ವಿಶ್ವವಿಖ್ಯಾತ ದಸರಾ: ಸೆ.20 ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ವಿಶ್ವವಿಖ್ಯಾತ ದಸರಾ: ಸೆ.20 ರಂದು ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

0

ಮೈಸೂರು(Mysuru): ನವರಾತ್ರಿಯಲ್ಲಿ ರಾಜವಂಶಸ್ಥರು ನಡೆಸುವ ಖಾಸಗಿ ದಸರಾದ ಪ್ರಮುಖ ಆಕರ್ಷಣೆ ರತ್ನಖಚಿತ ಸಿಂಹಾಸನದ ಜೋಡಣಾ ಕಾರ್ಯ ಸೆಪ್ಟೆಂಬರ್ 20 ರಂದು ನಡೆಯಲಿದೆ.

ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯ ಸ್ಟ್ರಾಂಗ್​​ ರೂಮ್ ನಲ್ಲಿರುವ ಸಿಂಹಾಸನದ ಬಿಡಿ ಭಾಗವನ್ನು ಸೆಪ್ಟೆಂಬರ್ 20 ರ ಬೆಳಗ್ಗೆ ಪೂಜಾ – ಕೈಂಕರ್ಯಗಳನ್ನು ನಡೆಸಿ ಭದ್ರತಾ ಕೊಠಡಿಯಿಂದ ಅಂಬಾ ವಿಲಾಸ ಅರಮನೆಗೆ ತರಲಾಗುವುದು.

ಅಲ್ಲಿ ನವಗ್ರಹ ಹೋಮ, ಗಣಪತಿ ಹೋಮ ಸೇರಿದಂತೆ ಹಲವಾರು ಹೋಮಗಳನ್ನು ಮಾಡಿದ ನಂತರ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಲಿದೆ.

ಹೇಗಿರಲಿದೆ ಸಿಂಹಾಸನ ಜೋಡಣೆ: ಶತಮಾನಗಳಿಂದಲೂ ಅರಮನೆಯ ರತ್ನಖಚಿತ ಸಿಂಹಾಸನವನ್ನು ಮೈಸೂರಿನ ಹೊರ ಭಾಗದಲ್ಲಿರುವ ಗೆಜ್ಜಗ ಹಳ್ಳಿಯ ಯಜಮಾನರ ಕುಟುಂಬ ಸಿಂಹಾಸನ ಜೋಡಿಸುತ್ತಾ ಬಂದಿದ್ದಾರೆ.

ಈ ಸಿಂಹಾಸನವನ್ನು 13 ಭಾಗಗಳಾಗಿ ವಿಂಗಡಿಸಿ ಭದ್ರತಾ ಕೊಠಡಿಯಲ್ಲಿ ಇಟ್ಟಿರುತ್ತಾರೆ. ಇಲ್ಲಿ ರಾಜರು ಕುಳಿತುಕೊಳ್ಳುವ ಭಾಗ ಆಸನ. ಸಿಂಹಾಸನವನ್ನು ಹತ್ತಲು ಚಿನ್ನದ ಮೆಟ್ಟಿಲುಗಳು. ಸಿಂಹಾಸನದ ಮೇಲ್ಭಾಗದಲ್ಲಿ ಚಿನ್ನದ ಛತ್ರಿ ಸೇರಿದಂತೆ 13 ಭಾಗಗಳನ್ನು ಗೆಜ್ಜಗಹಳ್ಳಿ ಗ್ರಾಮಸ್ಥರು ಸೆ. 20 ರಂದು ಸಿಂಹಾಸನವನ್ನು ಜೋಡಿಸುವ ಕೆಲಸ ನಡೆಸಿ ಇದಕ್ಕೆ ಸ್ವರ್ಣಾಸನ ಜೋಡಣಾ ಕಾರ್ಯ ಎಂದು ಕರೆಯುತ್ತಾರೆ.

ಈ ರತ್ನಖಚಿತ ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯ ಭಾಗದಲ್ಲಿ ವಿಷ್ಣು ದೇವರುಗಳ ಚಿತ್ರಗಳಿವೆ. ಜೊತೆಗೆ 4 ಸಿಂಹಗಳಿವೆ. ಇದರ ಜೊತೆಗೆ ಚಿನ್ನದ ಛತ್ರಿಯ ಮೇಲೆ ಸಂಸ್ಕೃತ ಶ್ಲೋಕ, ಕುದುರೆ, ಹಂಸ, ನಾಗದೇವತೆಗಳು ಹಾಗೂ ಸ್ವಸ್ತಿಕ್ ಚಿಹ್ನೆಗಳನ್ನು ಬಳಸಲಾಗಿದೆ.

ಇದನ್ನು ಸೆ.20 ರಂದು ಜಿಲ್ಲಾಡಳಿತ ಹಾಗೂ ರಾಜ ವಂಶಸ್ಥರ ಸಮ್ಮುಖದಲ್ಲಿ ಜೋಡಿಸುವ ಕಾರ್ಯ ನಡೆಯಲಿದ್ದು. ಸೆ. 26 ರ ಶರನ್ನವರಾತ್ರಿಯ ಆರಂಭದ ದಿನ ಚಿನ್ನದ ಸಿಂಹಾಸನಕ್ಕೆ ಸಿಂಹವನ್ನು ಜೋಡಣೆ ಮಾಡಿ ರಾಜ ವಂಶಸ್ಥರು ಶರನ್ನವರಾತ್ರಿಯ ಪೂಜೆಯನ್ನು ನೆರವೇರಿಸಿ ಖಾಸಗಿ ದರ್ಬಾರ್ ನಡೆಸುತ್ತಾರೆ.

ಹಿಂದಿನ ಲೇಖನನಾಡಹಬ್ಬ ದಸರಾ: ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಮುಂದಿನ ಲೇಖನನಾನೂ ಬುದ್ಧನಾಗಬಹುದೇ?