ಮನೆ ಸುದ್ದಿ ಜಾಲ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಆರ್ಥಿಕ ಸಾಧನೆ ಗಮನಾರ್ಹ: ರಾಹುಲ್ ಅಗರ್ವಾಲ್

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಆರ್ಥಿಕ ಸಾಧನೆ ಗಮನಾರ್ಹ: ರಾಹುಲ್ ಅಗರ್ವಾಲ್

0

ಮೈಸೂರು(Mysuru): ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಾಮಾಣಿಕ ಮತ್ತು ಸಮರ್ಪಿತ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳ ಉತ್ತಮ ಪ್ರಯತ್ನದಿಂದ ಪ್ರಸಕ್ತ ವರ್ಷದಲ್ಲಿ ಮೈಸೂರು ವಿಭಾಗದ ಆರ್ಥಿಕ ಸಾಧನೆ ಗಮನಾರ್ಹವಾಗಿದೆ ಎಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಹೇಳಿದರು.

ಮೈಸೂರು ವಿಭಾಗದ ವತಿಯಿಂದ 74 ನೆಯ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರ ಸಮ್ಮುಖದಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಡಿಸೆಂಬರ್ 2022 ರ ಅಂತ್ಯದವರೆಗಿನ ಒಟ್ಟು ಆದಾಯವು ರೂ 886.24 ಕೋಟಿಗಳಾಗಿದ್ದು, ಹಿಂದಿನ ವರ್ಷಕ್ಕಿಂತ 3% ಹೆಚ್ಚಾಗಿದೆ. ಸರಕು ಸಾಗಣೆ ವಿಭಾಗದಲ್ಲಿ, ವಿಭಾಗವು 557.34 ಕೋಟಿ ರೂ.ಗಳ ಆದಾಯದೊಂದಿಗೆ 6.53 ಮಿಲಿಯನ್ ಟನ್‌ಗಳ ಸರಕ್ಕನ್ನು ಲೋಡ್ ಮಾಡಿದ್ದು, ಇದು ಹಿಂದಿನ ವರ್ಷ (504.71 ಕೋಟಿಗಳ ಆದಾಯ ಮತ್ತು 6.49 MT ಲೋಡಿಂಗ್) ಕ್ಕೆ ಹೋಲಿಸಿದರೆ ಕ್ರಮವಾಗಿ 10% ಮತ್ತು 1% ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ವಿಭಾಗವು ರೂ.30.93 ಕೋಟಿ ರೂಗಳನ್ನು ಇತರೆ ಮೂಲಗಳಿಂದ ಗಳಿಸಿದ್ದು, ಹಣಕಾಸು ಇಲಾಖೆಯು ಆಂತರಿಕ ತಪಾಸಣೆಯ ಸಮಯದಲ್ಲಿ ತೋರಿಸಿದ ಶ್ರದ್ಧೆಯಿಂದಾಗಿ, ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ವಿಭಾಗವು 37.81 ಕೋಟಿ ರೂಪಾಯಿಗಳ ಉಳಿತಾಯವನ್ನು ಸಾಧಿಸಿದೆ ಎಂದು ಹೇಳಿದರು.

ಮೈಸೂರು ವಿಭಾಗದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾವು ಒಂದು ತಿಂಗಳಿನಲ್ಲಿ ಸರಕು ಸಾಗಣಿಕೆಯಲ್ಲಿ ರೂ. 100 ಕೋಟಿ ಗಳಿಕೆಯನ್ನು ದಾಟಲು ಸಮರ್ಥರಾಗಿದ್ದೇವೆ, ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ ರೂ. 108.60 ಕೋಟಿಗಳ ಸಾಗಾಟ ಡಿಸೆಂಬರ್ 2022 ರಲ್ಲಿ ಸಾಧ್ಯವಾಗಿದೆ. ಸರಕ್ಕಿನ ತೂಕದ ಪ್ರಕಾರವೂ ಸಹ, ವಿಭಾಗವು ಡಿಸೆಂಬರ್ 2022 ರಲ್ಲಿ 0.988 ಮಿಲಿಯನ್ ಟನ್‌’ಗಳನ್ನು ಸಾಧಿಸಿದ್ದೂ, ಡಿಸೆಂಬರ್ 2021 ರ ಅಂಕಿ-ಅಂಶವಾದ 0.918 ಮಿಲಿಯನ್ ಟನ್‌’ಗಳನ್ನು ಮೀರಿಸಿ, ಯಾವುದೇ ಒಂದು ತಿಂಗಳಿನಲ್ಲಿ ಸಾಧಿಸಿದ ಅತ್ಯಧಿಕ ಲೋಡಿಂಗ್ ಇದಾಗಿದೆ. ಡಿಸೆಂಬರ್ 2022 ರ ಅಂತ್ಯದ ವೇಳೆಗೆ ಪ್ರಯಾಣಿಕರ ಆದಾಯವು ರೂ 281.08 ಕೋಟಿಗಳಷ್ಟಾಗಿದ್ದೂ, ಇದು ಹಿಂದಿನ ವರ್ಷಕ್ಕೆ (ರೂ 134.60 ಕೋಟಿ) ಹೋಲಿಸಿದರೆ 109% ಹೆಚ್ಚಾಗಿದೆ ಎಂದು ಅವರು ಹೇಳಿದರು.

ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನೇ ತನ್ನ ಪ್ರಧಾನ ಗಮನವನ್ನಾಗಿ ಮುಂದುವರೆಸಿದೆ. ಮೈಸೂರು ವಿಭಾಗವು ಡಿಸೆಂಬರ್ 2022 ರವರೆಗೆ 23.61 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ. ಪ್ರಯಾಣಿಕರನ್ನು ಸಾಗಿಸುವ ರೈಲುಗಳ ಸಮಯಪಾಲನೆಯ ಕಾರ್ಯಕ್ಷಮತೆಯು ಉತ್ತಮವಾಗಿದ್ದೂ, ಮೇಲ್ / ಎಕ್ಸ್‌ ಪ್ರೆಸ್ ರೈಲುಗಳು 98.7% ಕ್ಕಿಂತ ಹೆಚ್ಚು ಸಮಯಪಾಲನೆಯೊಂದಿಗೆ ಸಂಚರಿಸುವುದರೊಂದಿಗೆ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಅವರು ಹೇಳಿದರು.

ವಿಭಾಗದ ಸಾಧನೆಯ ಬಗ್ಗೆ ಮುಂದುವರಿಸಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ವಿಭಾಗದ 20 ನಿಲ್ದಾಣಗಳಲ್ಲಿ ‘ಸ್ವಯಂ ವಾಚ್ಛಿತ’ ಘೋಷಣಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ವಿಭಾಗದ 35 ನಿಲ್ದಾಣಗಳಲ್ಲಿ ಎರಡೂ ಕಡೆಯ ‘ಎಲ್‌ಇಡಿ ಜಿಪಿಎಸ್’ ಗಡಿಯಾರಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಭಾಗದ ಹಳಿಗಳಲ್ಲಿ ವೇಗವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, 119 ಕಿಮೀಗಳಷ್ಟು ಹಳಿಯಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 110 ಕಿಮೀಗೆ ಏರಿಸಲಾಗಿದೆ ಮತ್ತು ಚಿಕ್ಕಜಾಜೂರು-ರಾಯದುರ್ಗ ಮತ್ತು ಹಾಸನ-ಸಕಲೇಶಪುರ ಭಾಗಗಳ ನಡುವಿನ 172 ಕಿಮೀಗಳಷ್ಟು ಲೂಪ್‌ಲೈನ್ ನಲ್ಲಿ ವೇಗವನ್ನು 15 ಕಿಮೀ ನಿಂದ 30 ಕಿಮೀ ಗೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವೇಗದ, ಆರ್ಥಿಕ ಸಹಕಾರಿ ಮತ್ತು ಪರಿಸರ ಪೂರಕ ಪ್ರಯಾಣಕ್ಕಾಗಿ, ರೈಲ್ವೆಯು ವೇಗದ ವಿದ್ಯುದ್ದೀಕರಣ ಯೋಜನೆಗಳಿಗೆ ಬದ್ಧವಾಗಿದೆ. ವಿಭಾಗದ ಹೊಸದುರ್ಗ-ಬೀರೂರು, ಚಿಕ್ಕಜಾಜೂರು-ತೋಳಹುಣಸೆ, ಮೈಸೂರು-ಚಾಮರಾಜನಗರ, ಬೀರೂರು-ಅರಸೀಕೆರೆ-ಸಂಪಿಗೆರೋಡ್ ಮತ್ತು ಬೀರೂರು-ಮಸರಹಳ್ಳಿ ಭಾಗಗಳ ನಡುವೆ ಸುಮಾರು 275 ಕಿಲೋಮೀಟರ್ ಗಳಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ವಿಭಾಗದಲ್ಲಿನ ಇತರ ವಿದ್ಯುದೀಕರಣ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಡಿಸೆಂಬರ್ 2023 ರೊಳಗೆ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ರಾಷ್ಟ್ರೀಯ ಯೋಜನೆಯ ಪ್ರಕಾರವೇ ಅವುಗಳನ್ನು ಕಾರ್ಯಗತಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ವಿಭಾಗದಲ್ಲಿ ಮಾನವ ಸಂಪನ್ಮೂಲ ರಂಗದಲ್ಲಿ ಕೈಗೊಂಡ ವಿವಿಧ ಸಿಬ್ಬಂದಿ ಕಲ್ಯಾಣ ಕ್ರಮಗಳನ್ನು ಪಟ್ಟಿ ಮಾಡಿದರು ಮತ್ತು ಡಿಸೆಂಬರ್ 2021 ರವರೆಗೆ 802 ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ ಮತ್ತು 121 ಉದ್ಯೋಗಿಗಳಿಗೆ ಆರ್ಥಿಕ ಉನ್ನತೀಕರಣವನ್ನು ನೀಡಲಾಗಿದೆ ಎಂದು ಹೇಳಿದರು.

ಹಿಂದಿನ ಲೇಖನಮಂಡ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಸ್ವಪಕ್ಷೀಯರಿಂದಲೇ ‘ಗೋ ಬ್ಯಾಕ್​ ಆರ್​.ಅಶೋಕ್’ ಅಭಿಯಾನ
ಮುಂದಿನ ಲೇಖನದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿ