ಮನೆ ದೇವಸ್ಥಾನ ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

ಏಕಾಂತಕ್ಕೆ ಗೊಮ್ಮಟಗಿರಿ ವಿಹಾರ

0

ಮೈಸೂರು ಪ್ರವಾಸ ತಾಣಗಳ ಸ್ವರ್ಗ ಲೋಕ. ಇಲ್ಲಿ ಏನಿಲ್ಲ? ಎಲ್ಲವೂ ಇದೆ. ಎಷ್ಟೇ ನೋಡಿದರೂ ಮುಗಿಯದಷ್ಟು ಪ್ರವಾಸ ತಾಣಗಳಿವೆ. ಅವುಗಳಲ್ಲಿ ಎಲೆಮರೆಯ ಕಾಯಂತಿರುವ ಗೊಮ್ಮಟಗಿರಿಯೂ ಒಂದು. ಜೈನರ ಪವಿತ್ರ ಕ್ಷೇತ್ರವಾದ ಈ ತಾಣಕ್ಕೆ ಶ್ರವಣ ಗುಡ್ಡ ಎಂತಲೂ ಕರೆಯುತ್ತಾರೆ.

 ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಬಿಳೀಕೆರೆ ಹೋಬಳಿ ಆವೃತ್ತಿಯಲ್ಲಿದೆ. ಬೆಂಗಳೂರಿನಿಂದ 160 ಕಿ.ಮೀ. ಹಾಗೂ ಮೈಸೂರು ನಗರ ಪ್ರದೇಶದಿಂದ 15 ಕಿ.ಮೀ. ದೂರದಲ್ಲಿದೆ. 700 ವರ್ಷಗಳಷ್ಟು ಪುರಾತನ ಕಾಲದ ದೇಗುಲವಿದು. ಗುಡ್ಡದ ತುದಿಯಲ್ಲಿರುವ ಈ ಕ್ಷೇತ್ರದಲ್ಲಿ 12 ಅಡಿ ಎತ್ತರದ ಏಕ ಶಿಲಾ ಗೊಮ್ಮಟ ಮೂರ್ತಿ ಇದೆ. 200 ಅಡಿ ಎತ್ತರದಲ್ಲಿರುವ ಈ ದೇಗುಲಕ್ಕೆ 90 ಮೆಟ್ಟಿಲುಗಳನ್ನು ಏರಿ ಸಾಗಬೇಕು.

ಕರ್ನಾಟಕದಲ್ಲಿರುವ ಉಳಿದ ಗೊಮ್ಮಟ ಪ್ರತಿಮೆಗಳಿಗೆ ಹೋಲಿಸಿದರೆ ಇದು ಬಹಳ ಚಿಕ್ಕದಾದ ಮೂರ್ತಿ ಎನ್ನಲಾಗುತ್ತದೆ. ಇಲ್ಲಿ 24 ಜೈನ ತೀರ್ಥಂಕರರ ಪುಟ್ಟ ಪುಟ್ಟ ಬಸದಿಗಳಿರುವುದನ್ನು ಕಾಣಬಹುದು. ಇಲ್ಲೂ ಸಹ ಮಹಾ ಮಸ್ತಕಾಭಿಷೇಕ ಮಾಡಲಾಗುತ್ತದೆ. ಶ್ರವಣಬೆಳಗೊಳದಲ್ಲಿ ನಡೆದಷ್ಟು ಅದ್ದೂರಿಯಲ್ಲಿ ನಡೆಯದಿದ್ದರೂ, ಆ ವೇಳೆ ಸಾವಿರಾರೂ ಭಕ್ತರು ಆಗಿಸುತ್ತಾರೆ. ಶ್ರವಣಬೆಳಗೊಳದಂತೆಯೇ ಇದೆ… ಗೊಮ್ಮಟಗಿರಿ ಹಾಗೂ ಶ್ರವಣಬೆಳಗೊಳ ಅನೇಕ ಸಾಮ್ಯತೆಯನ್ನು ಹೊಂದಿವೆ. ಎರಡು ದೇಗುಲವೂ ಬೆಟ್ಟದ ತುದಿಯಲ್ಲಿಯೇ ಇರುವುದು, ಬೆಟ್ಟ ಹತ್ತಲು ಹಲವಾರು ಮೆಟ್ಟಿಲುಗಳನ್ನು ಹತ್ತಿ ಸಾಗುವುದು, ಮಸ್ತಕಾಭಿಷೇಕದ ಪದ್ಧತಿ ಹಾಗೂ ಭಕ್ತರ ಹರಿವು ಒಂದೇ ತರಹದಲ್ಲಿವೆ. ಗೊಮ್ಮಟನ ವಿಗ್ರಹದ ಎತ್ತರ ಮಾತ್ರ ಸಾಮ್ಯತೆ ಇಲ್ಲದಿರುವುದನ್ನು ಗಮನಿಸಬಹುದು.

ಈ ತಾಣ ಸುಂದರವಾದ ಗಿರಿಯ ತಾಣವಾಗಿರುವುದರಿಂದ, ವಾರದ ರಜೆಯ ಸಮಯವನ್ನು ನಿಶ್ಚಿಂತೆಯಾಗಿ ಇಲ್ಲಿ ಕಳೆಯಬಹುದು. ಶಾಂತವಾಗಿರುವ ತಂಪಾದ ವಾತಾವರಣ, ಸುತ್ತಲು ಹಸಿರು ಸಿರಿ ಇರುವ ಈ ಪ್ರದೇಶ ಏಕಾಂತ ಬಯಸುವವರಿಗೆ ಯೋಗ್ಯ ಸ್ಥಳ. ಇಲ್ಲಿಗೆ ಸ್ವಂತ ವಾಹನವನ್ನು ತಂದರೆ ಸಾಕಷ್ಟು ಸಮಯವನ್ನು ಇಲ್ಲಿ ಕಳೆಯಬಹುದು. ಊರಿನ ಒಳ ಭಾಗದಲ್ಲಿ ಇರುವುದರಿಂದ ಜೊತೆಯಲ್ಲಿ ಒಂದಿಷ್ಟು ಹಣ್ಣು, ತಿಂಡಿ, ನೀರನ್ನು ಇಟ್ಟುಕೊಂಡರೆ ಊಟ-ತಿಂಡಿಗಾಗಿ ಪರದಾಡುವ ಸಂದರ್ಭ ಬರದು.

ಹತ್ತಿರದ ಆಕರ್ಷಣೆಯಾಗಿ ಮೈಸೂರು ಮೃಗಾಲಯ, ಅರಮನೆ, ಕೆಆರ್‍ಎಸ್, ಬೃಂದಾವನ ಸೇರಿದಂತೆ ಅನೇಕ ಸ್ಥಳಗಳನ್ನು ನೋಡಬಹುದು.

ಹಿಂದಿನ ಲೇಖನಮೈಸೂರಲ್ಲಿ ಒಂಟಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ; ನಾಲ್ವರು ಯುವತಿಯರ ರಕ್ಷಣೆ
ಮುಂದಿನ ಲೇಖನಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳ: ಕೊಟ್ಟ ಮಾತು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ- ಬಿ.ಶ್ರೀರಾಮುಲು