ಮನೆ ಕಾನೂನು ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯ: ಎನ್‌ಸಿಡಿಆರ್‌ಸಿ

ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯ: ಎನ್‌ಸಿಡಿಆರ್‌ಸಿ

0

ರಕ್ತದ ಗುಂಪಿನ ವ್ಯತ್ಯಾಸದಿಂದಾಗಿ ರೋಗಿ ಸಾವನ್ನಪ್ಪಿದರೆ ಅದು ವೈದ್ಯಕೀಯ ನಿರ್ಲಕ್ಷ್ಯವಾಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ಪುನರುಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ 2002ರಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬಕ್ಕೆ ₹ 1 ಲಕ್ಷ ವ್ಯಾಜ್ಯ ವೆಚ್ಚ ಮತ್ತು ₹ 20 ಲಕ್ಷ ಪರಿಹಾರ ಒದಗಿಸುವಂತೆ ತಿರುವನಂತಪುರ ಮೂಲದ ಖಾಸಗಿ ಆಸ್ಪತ್ರೆಗೆ ನ್ಯಾಯಮೂರ್ತಿ ಆರ್‌ ಕೆ ಅಗರವಾಲ್ (ಅಧ್ಯಕ್ಷರು) ಮತ್ತು ಡಾ ಎಸ್‌ ಎಂ ಕಾಂತಿಕರ್ (ಸದಸ್ಯರು) ಅವರಿದ್ದ ಪೀಠ ಸೂಚಿಸಿತು.

ಸಜೀನಾ ಎಂಬ ಮಹಿಳೆ ಮತ್ತು ಆಕೆಯ ಪತಿ ಎ ಕೆ ನಜೀರ್ ಅವರು ಸಮದ್ ಆಸ್ಪತ್ರೆಯಲ್ಲಿ ಬಂಜೆತನ ನಿವಾರಣಾ ಚಿಕಿತ್ಸೆ ಪಡೆಯುತ್ತಿದ್ದರು. ಗರ್ಭಾಶಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ನಂತರ, ಸಜೀನಾ ಅವರ ರಕ್ತ ವರ್ಗಾವಣೆ ಪ್ರಾರಂಭವಾಯಿತು ಆದರೆ ಒ+ ಬದಲಿಗೆ ಬಿ+ ರಕ್ತವನ್ನು ನೀಡಿದ್ದರಿಂದ ಅದು ವ್ಯತಿರಿಕ್ತ ಪರಿಣಾಮ ಬೀರಿ ಕೆಲ ದಿನಗಳಲ್ಲೇ ಆಕೆ ಮೃತಪಟ್ಟಿದ್ದರು.

ಆಸ್ಪತ್ರೆಯು ವೈದ್ಯಕೀಯ ವೆಚ್ಚ ₹ 4.5 ಲಕ್ಷ ಹಾಗೂ, ಪರಿಹಾರ ರೂಪದಲ್ಲಿ ₹ 45 ಲಕ್ಷ ನೀಡಬೇಕು ಎಂದು ನಜೀರ್ ಕೇರಳ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದರು. ಆದರೆ ನಜೀರ್‌ ಅವರ ಆರೋಪಗಳನ್ನು ಆಸ್ಪತ್ರೆ ನಿರಾಕರಿಸಿತ್ತು. ದೂರನ್ನು ಭಾಗಶಃ ಒಪ್ಪಿದ ರಾಜ್ಯ ಆಯೋಗ ₹ 9.33 ಲಕ್ಷ ಪರಿಹಾರ ನೀಡುವಂತೆ ಸೂಚಿಸಿತ್ತು.

ರಾಜ್ಯ ಆಯೋಗದ ಸಂಶೋಧನೆಗಳನ್ನು ಆಧರಿಸಿ ಎನ್‌ಸಿಡಿಆರ್‌ಸಿ, ಆಸ್ಪತ್ರೆಯ ನಡೆಯಲ್ಲಿ ಎದ್ದುಕಾಣುವ ಲೋಪಗಳಿವೆ. ರಕ್ತದ ಗುಂಪು ಮತ್ತು ರೋಗಿಗಳನ್ನು ಗುರುತಿಸುವಲ್ಲಿ ದೋಷ ಉಂಟಾಗಿರುವ ಸಾಧ್ಯತೆ ಹೆಚ್ಚಿದೆ. ಈ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯ ಸಿಬ್ಬಂದಿ ಹೊಣೆಗಾರರು. ಹೀಗಾಗಿ ಆಯೋಗ ₹9,33,000 ಪರಿಹಾರ ಒದಗಿಸುವಂತೆ ಸೂಚಿಸಿರುವುದು ತಪ್ಪು. ಅರ್ಜಿದಾರರು ಹೆಚ್ಚಿನ ಪರಿಹಾರ ಪಡೆಯಲು ಅರ್ಹರು ಎಂದು ಅದು ಅಭಿಪ್ರಾಯಪಟ್ಟಿತು.

ಹಿಂದಿನ ಲೇಖನIDBI ಬ್ಯಾಂಕ್‌: 1044 ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ:  ಹತ್ತು ವಾರಗಳಲ್ಲಿ ತೀರ್ಮಾನಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ