ಮನೆ ರಾಜ್ಯ ಮುಂದಿನ 5 ವಷರ್ಗಳಲ್ಲಿ ಕರ್ನಾಟಕ ಏಷ್ಯಾದಲ್ಲಿಯೇ ಅತ್ಯುತ್ತಮ ಆರೋಗ್ಯ ನಿರ್ವಹಣೆ ಮಾಡುವ ರಾಜ್ಯವಾಗಬೇಕು: ಸಿಎಂ ಬೊಮ್ಮಾಯಿ

ಮುಂದಿನ 5 ವಷರ್ಗಳಲ್ಲಿ ಕರ್ನಾಟಕ ಏಷ್ಯಾದಲ್ಲಿಯೇ ಅತ್ಯುತ್ತಮ ಆರೋಗ್ಯ ನಿರ್ವಹಣೆ ಮಾಡುವ ರಾಜ್ಯವಾಗಬೇಕು: ಸಿಎಂ ಬೊಮ್ಮಾಯಿ

0

ಬೆಂಗಳೂರು (Bengaluru): ಮುಂದಿನ 5 ವಷರ್ಗಳಲ್ಲಿ ದೇಶದಲ್ಲಿ ಮಾತ್ರವಲ್ಲ, ಕರ್ನಾಟಕ ಏಷ್ಯಾದಲ್ಲಿಯೇ ಅತ್ಯುತ್ತಮ ಆರೋಗ್ಯ ನಿರ್ವಹಣೆ ಮಾಡುವ ರಾಜ್ಯವಾಗಬೇಕು ಎನ್ನುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಆಯೋಜಿಸಿದ್ದ  ರಾಷ್ಟ್ರೀಯ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ನಾವು ಮುಂದುವರೆಯಬೇಕು. ಅದಕ್ಕಾಗಿ ಡಾ.ಗುರುರಾಜ್ ಅವರ ನೇತೃತ್ವದಲ್ಲಿ ಆರೋಗ್ಯ ಕ್ಷೇತ್ರದ ಮುಂದಿನ 25 ವರ್ಷಗಳಿಗೆ ವಿಷನ್ ಡಾಕ್ಯಮಂಟ್ ಸಿದ್ಧಪಡಿಸಿದೆ. ಎಲ್ಲಾ ವೈದ್ಯಕೀಯ ಕ್ಷೇತ್ರದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಉಲ್ಲೇಖಿಸಿ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದೆ. ದೇಶದಲ್ಲಿಯೇ ಆರೋಗ್ಯ ನಿರ್ವಹಣೆಯ ಸೇವೆಗಳಿಗೆ ಸಂಬಂಧಿಸಿದ ವಿಶ್ವಕೋಶ ಇದಾಗಲಿದೆ. ಇದನ್ನು  ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ಡಾ.ಬಿ.ಸಿ. ರಾಯ್ ಅವರು ನಮಗೆ ಪ್ರೇರಣೆ.  ಅಂಥವರು ಮುಖ್ಯಮಂತ್ರಿಯಾಗಿರುವುದು ಪ್ರಜಾಪ್ರಭುತ್ವದ ಹೆಗ್ಗಳಿಕೆ. ಶ್ರದ್ಧೆ, ಭದ್ಧತೆಯಿಂದ ಆರೋಗ್ಯ ಭರಿತ ಸಮಾಜವನ್ನು ಕಟ್ಟಲು ಸಂಕಲ್ಪ ಮಾಡೋಣ ಎಂದರು.

9 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳನ ಸ್ಥಾಪನೆ

ಕರ್ನಾಟಕ ರಾಜ್ಯ ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. 9 ಜಿಲ್ಲೆಗಳನ್ನು ಹೊರತು ಪಡಿಸಿದರೆ ಎಲ್ಲಾ ಕಾಲೇಜುಗಳಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ನಮ್ಮ ಸರ್ಕಾರ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದೆ. ಈ ಒಂಬತ್ತು ಜಿಲ್ಲೆಗಳಲ್ಲಿಯೂ ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ.

ಗುಣಮಟ್ಟದ ಚಿಕಿತ್ಸೆ ಕೈಗೆಟಕುವ ದರದಲ್ಲಿ ದೊರಕಿಸಲು ಪ್ರಧಾನಿಗಳ ಕ್ರಮ

ಕಾಲ ಬದಲಾಗಿದೆ. ಜನಸಂಖ್ಯೆಯ ಹೆಚ್ಚಳ ಬದಲಾವಣೆಗಳನ್ನು ತಂದಿದೆ. ಗುಣಮಟ್ಟದ ಚಿಕಿತ್ಸೆ ಕೈಗೆಟಕುವ ದರದಲ್ಲಿ ದೊರಕಿಸಬೇಕು. ನಮ್ಮ ಪ್ರಧಾನ ಮಂತ್ರಿಗಳು 130 ಕೋಟಿ ಜನಸಂಖ್ಯೆಯ ದೇಶದಲ್ಲಿ ಸರ್ಕಾರಿ ಪ್ರಾಯೋಜಿತ ವಿಮೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇಷ್ಟು ದೊಡ್ಡ ದೇಶಕ್ಕೆ ಇಂಥ ಯೋಜನೆ ರೂಪಿಸಿ ಜಾರಿಗೆ ತರುವುದು ಸುಲಭದ ಮಾತಲ್ಲ. ದೂರದೃಷ್ಟಿಯುಳ್ಳ ವ್ಯಕ್ತಿ ಮಾತ್ರ ಇದನ್ನು ಮಾಡಬಲ್ಲರು. ಶುದ್ಧ ಕುಡಿಯುವ ನೀರು ಮನೆಮನೆಗೂ ನೀಡುವ ಧೈರ್ಯವನ್ನು ನಮ್ಮ ಪ್ರಧಾನಿಗಳು ಮಾಡಿದ್ದಾರೆ. ಸ್ವಚ್ಛ ಭಾರತ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ.  ದೇಶದಲ್ಲಿ 200 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ. 

ಬಜೆಟ್ ನಲ್ಲಿ ಆರೋಗ್ಯಕ್ಕೆ ಮಹತ್ವ

ನಮ್ಮ ಬಜೆಟ್ ನಲ್ಲಿ ಆರೋಗ್ಯಕ್ಕೆ ಮಹತ್ವ ನೀಡಲಾಗಿದೆ. ಎಲ್ಲಿ ಸಮಸ್ಯೆಗಳಿದ್ದವೋ ಅಲ್ಲಿ ಅವುಗಳನ್ನು ನಿವಾರಿಸುವ ಪ್ರಯತ್ನ  ಮಾಡಲಾಗಿದೆ. ಡಯಾಲಿಸ್ ಸೈಕಲ್ಗಳನ್ನು ಪ್ರತಿ ದಿನ 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕೀಮೋಥೆರಪಿ ಕೇಂದ್ರಗಳನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. 60 ಕ್ಕೆ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆಯನ್ನು ಬಡವರಿಗಾಗಿ ರೂಪಿಸಲಾಗಿದೆ. ಕಿವಿಗಳ ಸಮಸ್ಯೆ  ನಿವಾರಿಸಲು ಕಾಕ್ಲಿಯರ್ ಇಂಪ್ಲಾಂಟ್ ಗಾಗಿ 500 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. 60 ಕ್ಕೆ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ, ಹೃದ್ರೋಗ ಶಿಬಿರಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಕೈಗೊಳ್ಳಲು ಜಯದೇವ ಆಸ್ಪತ್ರೆಯ ನಿರ್ದೇಶಕರಿಗೆ ತಿಳಿಸಲಾಗಿದೆ.  ಕ್ಯಾನ್ಸರ್ ರೋಗಕ್ಕೂ ಇದೇ ಮಾದರಿ ಚಿಕಿತ್ಸಾ ಶಿಬಿರಗಳನ್ನು ಕೈಗೊಳ್ಳುವ ಚಿಂತನೆ ಇದೆ. ಮಾನಸಿಕ ರೋಗ್ಯಕ್ಕೂ ಮಹತ್ವ ನೀಡಲಾಗಿದೆ.  ಖಿನ್ನತೆಗೆ ಚಿಕಿತ್ಸೆ  ನೀಡುವ ನಿಮ್ಹಾನ್ಸ್, ಕಿದ್ವಾಯಿಯ ಮೇಲಿರುವ ಹೊರೆ ತಗ್ಗಿಸಲು ಪ್ರಾಥಮಿಕ  ಮಾನಸಿಕ ಕಾಯಿಲೆಗಳನ್ನು ವಾಸಿ ಮಾಡಲು ಕ್ರಮ ವಹಿಸಲಾಗಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗಿದೆ.  ಕಲ್ಯಾಣ ಕರ್ನಾಟಕ ಭಾಗದಲ್ಲಿ 100 ಹೊಸ ಪಿ.ಹೆಚ್.ಸಿ ನಿರ್ಮಾಣ, ಹುಬ್ಬಳ್ಳಿಯಲ್ಲಿ  ಜಯದೇವ ಆಸ್ಪತ್ರೆಯನ್ನು, ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾರಂಭವಾಗುತ್ತಿದೆ. ಆರೋಗ್ಯ ಕ್ಷೇತ್ರದ ಸವಾಲುಗಳಗೆ ಸರ್ಕಾರ ಸ್ಪಂದಿಸುತ್ತಿದೆ.  ಇದು ಸಾಧ್ಯವಾಗಿರುವುದು  ವೈದ್ಯರ ಕರ್ತವ್ಯ ನಿಷ್ಠೆಯಿಂದ. ಸಾರ್ವಜನಿಕ ಜೀವನದಲ್ಲಿ  ಕೆಲವರು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವುದರಿಂದ ಸಮಾಜ ಉತ್ತಮವಾಗಿದೆ ಎಂದರು. 

ಹಿಂದಿನ ಲೇಖನಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ: ತ್ವರಿತ ವಿತರಣೆಗೆ ಮುಖ್ಯಮಂತ್ರಿ ಸೂಚನೆ
ಮುಂದಿನ ಲೇಖನಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ಮಹಿಳೆ ಸಾವು: ವೈದ್ಯೆ, ದಾದಿಯರಿಗೆ 15 ಲಕ್ಷ ರೂ. ದಂಡ