ಮನೆ ರಾಜ್ಯ ಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ಮಹಿಳೆ ಸಾವು: ವೈದ್ಯೆ, ದಾದಿಯರಿಗೆ 15 ಲಕ್ಷ ರೂ. ದಂಡ

ಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ಮಹಿಳೆ ಸಾವು: ವೈದ್ಯೆ, ದಾದಿಯರಿಗೆ 15 ಲಕ್ಷ ರೂ. ದಂಡ

0

ವಿಜಯಪುರ (Vijayapura): ಹೆರಿಗೆ ಮಾಡಿಸುವಲ್ಲಿ ನಿರ್ಲಕ್ಷ್ಯ ತೋರಿದ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಇತರೆ ದಾದಿಯರಿಗೆ ಒಟ್ಟು 15 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಮಹತ್ವದ ತೀರ್ಪು ನೀಡಿದೆ.

ತಿಕೋಟಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರಸ್ತುತ ಮುಳವಾಡ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಂದಿನಿ ಹಾಗೂ ಶೂಷ್ರುಕಿಯರಾದ ರೇಣುಕಾ, ಬನ್ನೂರ, ಜ್ಯೋತಿ ಹೊಸಮನಿ, ಸುನಿತಾ ಭಾವಿಮನಿ ಭಾರೀ ಮೊತ್ತದ ದಂಡ ತೆರಬೇಕಾಗಿದೆ.

ಈ ದಂಡದಲ್ಲಿ ವೈದ್ಯಾಧಿಕಾರಿ 11 ಲಕ್ಷ ರೂ. ಹಾಗೂ ಇತರರು 4 ಲಕ್ಷ ಸೇರಿ ಒಟ್ಟು 15 ಲಕ್ಷ ರೂ. ಗಳನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕೆಂದು ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ, ಮಹಿಳಾ ಸದಸ್ಯೆ ವಿ.ಬಿ. ಮುತಾಲಿಕ ದೇಸಾಯಿ, ಕಮಲಕಿಶೋರ ಜೋಶಿಯನ್ನೊಳಗೊಂಡ ಆಯೋಗ ಸದಸ್ಯರಿಗೆ ತೀರ್ಪಿನಲ್ಲಿ ತಿಳಿಸಿದ್ದಾರೆ. ದೂರುದಾರರ ಪರವಾಗಿ ನ್ಯಾಯವಾದಿ ಎ.ಜಿ. ಗುಳಗಾಂವಿ ವಾದ ಮಂಡಿಸಿದ್ದರು.

ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಸುರೇಶ ಮಜ್ಜಗಿ ಅವರ ಪತ್ನಿ ಜಯಶ್ರೀ ಮಜ್ಜಗಿ ಅವರು, ತೀವ್ರ ಹೆರಿಗೆ ನೋವಿನಿಂದ ತಿಕೋಟಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2018ರ ಜೂ.3ರಂದು ದಾಖಲಾಗಿದ್ದರು. ಆದರೆ ಆ ಸಮಯದಲ್ಲಿ ಕೇಂದ್ರದಲ್ಲಿ ವೈದ್ಯಾಧಿಕಾರಿ ಕರ್ತವ್ಯದಲ್ಲಿರಲಿಲ್ಲ. ಬಳಿಕ ವೈದ್ಯರು ಶುಶ್ರೂಕಿಯರಿಗೆ ಹೆರಿಗೆ ಮಾಡಿಸಲು ಸೂಚಿಸಿದ್ದರು. ವೈದ್ಯಾಧಿಕಾರಿ ಸೂಚನೆ ಮೇರೆಗೆ ದಾದಿಯರಾದ ರೇಣುಕಾ ಬನ್ನೂರ, ಜ್ಯೋತಿ ಹೊಸಮನಿ ಹಾಗೂ ಸುನಿತಾ ಭಾವಿ ಅವರು ಹೆರಿಗೆ ಮಾಡಿಸಿದ್ದಾರೆ. ಅದೇ ವೇಳೆ ಗರ್ಭಕೋಶವೂ ಹೊರಗೆ ಬಂದಿತ್ತು. ಇದರಿಂದಾಗಿ ಬೆದರಿದ ದಾದಿಯರು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲು ಸಲಹೆ ಮಾಡಿದ್ದಾರೆ.
ಏತನ್ಮಧ್ಯೆ ತೊಂದರೆಗೀಡಾದ ಮಹಿಳೆಯನ್ನು ವಿಚಾರಿಸಿದಾಗ ಹೆರಿಗೆ ವೇಳೆ ದಾದಿಯರು ಹೊಟ್ಟೆ ಮೇಲೆ ಕುಳಿತು, ಹೊಟ್ಟೆ ಒತ್ತುವ ಮೂಲಕ ಹೆರಿಗೆ ಮಾಡಿಸಿದರು. ಹೀಗಾಗಿ ಗರ್ಭಕೋಶ ಹೊರಗೆ ಬಂದಿದೆ ಎಂದು ಮಹಿಳೆ ವಿವರಿಸಿದ್ದರು. ತಕ್ಷಣವೇ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಗೆ ಜಾರಿದರು. ಮಾತ್ರವಲ್ಲ, ಚಿಕಿತ್ಸೆ ಫಲಿಸದೇ 2018ರ ಜೂ. 6ರಂದು ಮಹಿಳೆ ಮೃತಪಟ್ಟಿದ್ದರು ಎಂದು ಮೃತ ಜಯಶ್ರೀ ಗಂಡ ಸುರೇಶ‌ ಮಜ್ಜಗಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

ಆಯೋಗದ ಸದಸ್ಯರು ವಿಚಾರಣೆ ಕೈಗೆತ್ತಿಕೊಂಡು, ದೂರುದಾರರು ಸಲ್ಲಿಸಿದ ದಾಖಲೆ ಹಾಗೂ ಬಿಎಲ್‌ಡಿಇ ಆಸ್ಪತ್ರೆ ವೈದ್ಯರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ವೈದ್ಯಾಧಿಕಾರಿ ಹಾಗೂ ದಾದಿಯರ ನಿಷ್ಕಾಳಜಿಯೇ ಮಹಿಳೆ ಸಾವಿಗೆ ಕಾರಣವಾಗಿದೆ ಎಂದು ತೀರ್ಮಾನಿಸಿ 15 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಹಿಂದಿನ ಲೇಖನಮುಂದಿನ 5 ವಷರ್ಗಳಲ್ಲಿ ಕರ್ನಾಟಕ ಏಷ್ಯಾದಲ್ಲಿಯೇ ಅತ್ಯುತ್ತಮ ಆರೋಗ್ಯ ನಿರ್ವಹಣೆ ಮಾಡುವ ರಾಜ್ಯವಾಗಬೇಕು: ಸಿಎಂ ಬೊಮ್ಮಾಯಿ
ಮುಂದಿನ ಲೇಖನಭಾರತೀಯ ಸೇನೆಯಲ್ಲಿದೆ 90 ಹುದ್ದೆ; ಪಿಯುಸಿ, ಪಿಸಿಎಂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ