ನವದೆಹಲಿ : ಬಲಿಷ್ಠ ಆರ್ಥಿಕತೆ ಹೊಂದಿದ ಭಾರತ ಜಗತ್ತಿಗೆ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು. ಬಜೆಟ್ ನಂತರದ ವೆಬಿನಾರ್ನಲ್ಲಿ ಮಾತನಾಡಿದ ಅವರು, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಎಂಎಸ್ಎಂಇ ವಲಯ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಭಾರತೀಯ ಆರ್ಥಿಕತೆಯ ಪ್ರಮುಖ ಆಧಾರ ಸ್ತಂಭಗಳಾಗಿವೆ.
ಈ ವಲಯಗಳನ್ನು ಬಲಪಡಿಸುವುದರಿಂದ ದೇಶದ ಆರ್ಥಿಕ ಬೆಳವಣಿಗೆ ವೇಗಗೊಳ್ಳುತ್ತದೆ. ಇದು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಜಗತ್ತು ವಿಶ್ವಾಸಾರ್ಹ ಉತ್ಪಾದನಾ ಪಾಲುದಾರರನ್ನು ಹುಡುಕುತ್ತಿದೆ. ಈ ವಿಷಯದಲ್ಲಿ ಭಾರತಕ್ಕೆ ಉತ್ತಮ ಅವಕಾಶವಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು. ಗುಣಮಟ್ಟದ ಮೇಲೆ ಗಮನಹರಿಸಬೇಕು. ನಮ್ಮ ಉತ್ಪನ್ನಗಳ ಗುಣಮಟ್ಟ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಉದ್ಯಮಿಗಳಿಗೆ ಸಲಹೆ ನೀಡಿದರು. ಉತ್ಪನ್ನ ಮಾನದಂಡಗಳನ್ನು ಸುಧಾರಿಸುವುದು ಭಾರತೀಯ ವ್ಯವಹಾರ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ ಎಂದರು.
ಭಾರತವು ತನ್ನ ಬಲಿಷ್ಠ ಆರ್ಥಿಕತೆಯಿಂದ ಜಗತ್ತಿಗೆ ಆಶಾಕಿರಣವಾಗಿದೆ. ಭಾರತವು ಹಲವಾರು ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ದೇಶೀಯ ಕೈಗಾರಿಕೆಗಳು ಮತ್ತು ರಫ್ತುದಾರರಿಗೆ ವ್ಯಾಪಕ ಅವಕಾಶ ನೀಡುತ್ತದೆ. ಈ ಒಪ್ಪಂದಗಳಿಂದ ದೇಶದ ವ್ಯವಹಾರಕ್ಕೆ ಜಾಗತಿಕ ಮಟ್ಟದ ಮಾರುಕಟ್ಟೆಗಳಿಗೆ ಪ್ರವೇಶ ಸಿಗುತ್ತದೆ. ಈ ವರ್ಷದ ಬಜೆಟ್ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ಗೆ ದಾಖಲೆಯ ಮಟ್ಟದ ಬಂಡವಾಳ ವೆಚ್ಚವನ್ನು ಮೀಸಲಿಟ್ಟಿದೆ. ವರ್ಧಿತ ಬಂಡವಾಳ ವೆಚ್ಚವು ಪೂರೈಕೆ ಸರಪಳಿಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಒತ್ತಿ ಹೇಳಿದರು.














