ಮೈಸೂರು: ಸತ್ತವರನ್ನು ಕುರಿತು ಹೀನಾಯವಾಗಿ ಮಾತನಾಡಿ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ನಾಚಿಕೆಗೇಡು. ರಾಕೇಶ್ ಸಿದ್ದರಾಮಯ್ಯ ಅವರ ಬಗೆಗಿನ ಹೇಳಿಕೆಗೆ ಅವರ ಅಭಿಮಾನಿಗಳು ಕಾರ್ಯಪ್ಪ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಎಚ್ಚರಿಕೆ ನೀಡಿದರು.
ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಬೌನ್ಸರ್ ಹೊಡೆದ ಏಟಿನಿಂದ ಮೃತಪಟ್ಟಿದ್ದಾರೆಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಹೇಳಿದ್ದು, ಈ ಕುರಿತು ದಾಖಲೆ ಬಿಡುಗಡೆ ಮಾಡಲಿ ಇಲ್ಲವೇ ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಂಗಾಯಣದ ಆವರಣದಲ್ಲಿ ಅಡ್ಡಂಡ ಕಾರ್ಯಪ್ಪ ಅವರ ಅಣಕು ಶವಯಾತ್ರೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
ಸಂಸ್ಕೃತಿ, ಶಿಸ್ತಿಗೆ ಹೆಸರಾಗಿರುವ ಆರ್ ಎಸ್ ಎಸ್ ಕೂಡಲೇ ಕಾರ್ಯಪ್ಪ ಅವರನ್ನು ನಿಯಂತ್ರಿಸಬೇಕು. ಅಸಂಸ್ಕೃತಿಯ ಹೇಳಿಕೆ ನೀಡುವ ಮೂಲಕ ಆರ್ ಎಸ್ ಎಸ್ ಗೆ ಕಾರ್ಯಪ್ಪ ಕಳಂಕ ತಂದಿದ್ದಾರೆ ಎಂದು ಹೇಳಿದರು.
ಕಾರ್ಯಪ್ಪ ಅವರು ಹಿಂದೆ ಜೈಲಿಗೆ ಹೋಗಿದ್ದು ಏಕೆ ಎಂಬುದನ್ನು ಅವರು ಬಹಿರಂಗಪಡಿಸಬೇಕು. ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವ ಪ್ರವೃತ್ತಿಯನ್ನು ಇನ್ನಾದರೂ ಬಿಡಬೇಕು ಎಂದರು.
ತಾಯಿ ಕುರಿತ ಬಹುರೂಪಿ ರಂಗೋತ್ಸವದಲ್ಲಿ ಹಿರೇಮಗಳೂರು ಕಣ್ಣನ್ ಮಹಿಳೆಯರನ್ನು ಕುರಿತು ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಅವರು ಅಸಹ್ಯ ತರುವ ಹಾಗೂ ಸಮಾಜವನ್ನು ಕುಲಗೆಡಿಸುವ ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಇವರು ಸಂಸ್ಕೃತಿ ಚಿಂತಕರೆ? ಎಂದು ಪ್ರಶ್ನಿಸಿದರು.