ರಾಮನಗರ : 15 ಅಡಿ ಎತ್ತರದ ಕಾಂಪೌಂಡ್ ಹಾರಿ ಮೇಕೆ, ಕುರಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿರುವ ಘಟನೆ ಕನಕಪುರ ತಾಲೂಕಿನ ಮಳಗಾಳು ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಗ್ರಾಮದ ರೈತ ರಾಕೇಶ್ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ, ಮೇಕೆಗಳ ಮೇಲೆ ದಾಳಿ ಮಾಡಿದ್ದ ಪರಿಣಾಮ ಎರಡು ಕುರಿ, ಎರಡು ಮೇಕೆಗಳನ್ನ ಕೊಂದುಹಾಕಿತ್ತು. 15 ಅಡಿ ಎತ್ತರದ ಕಾಂಪೌಂಡ್ ಇದ್ದರೂ ಕೂಡಾ ಚಿರತೆ ಕೊಟ್ಟಿಗೆಗೆ ನುಗ್ಗಿ ದಾಳಿ ಮಾಡಿದೆ.
ಈ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ ವೇಳೆ ಗ್ರಾಮಸ್ಥರು ಚಿರತೆ ಸೆರೆಗೆ ಒತ್ತಾಯಿಸಿದ್ದರು. ಶುಕ್ರವಾರ ಮಾಳಗಾಳು ಗ್ರಾಮದ ಹೊರವಲಯದಲ್ಲಿ ಅರಣ್ಯಾಧಿಕಾರಿಗಳು ಬೋನ್ ಅಳವಡಿಸಿದ್ದರು. ಇಂದು ಅರಣ್ಯ ಇಲಾಖೆ ಬೋನಿಗೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು, ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

















