ಮನೆ ಸುದ್ದಿ ಜಾಲ ವಿಧಾನಸೌಧಕ್ಕೆ  ರಾಜಭವನದಿಂದ ನಡೆದಕೊಂಡು ಬಂದ ಸಚಿವ ಕೃಷ್ಣಬೈರೇಗೌಡ

ವಿಧಾನಸೌಧಕ್ಕೆ  ರಾಜಭವನದಿಂದ ನಡೆದಕೊಂಡು ಬಂದ ಸಚಿವ ಕೃಷ್ಣಬೈರೇಗೌಡ

0

ಬೆಂಗಳೂರು (ಜೂ.03): ರಾಜಕಾರಣ ಅಂದಮೇಲೆ ಅಲ್ಲಿ ಆಡಂಬರ, ಬೆಂಗಾವಲು ಪಡೆ, ನೂರಾರು ಕಾರುಗಳ ಓಡಾಟ ಸಾಮಾನ್ಯ. ಆದರೆ, ಈ ಹಮ್ಮು-ಬಿಮ್ಮುಗಳ ನಡುವೆಯೂ ತಮ್ಮ ಸರಳತೆಯಿಂದಲೇ ಜನರ ಮನಗೆದ್ದಿರುವ ನಾಯಕ ಕೃಷ್ಣಬೈರೇಗೌಡ. ಶನಿವಾರದಂದು ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಕೃಷ್ಣಬೈರೇಗೌಡ ಅವರು ತಮ್ಮ ಈ ‘ಸಿಂಪಲ್’ ವರ್ತನೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ಮುಗಿದ ತಕ್ಷಣ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮೊದಲ ಸಚಿವ ಸಂಪುಟ ಸಭೆಯನ್ನು ನಿಗದಿಪಡಿಸಲಾಗಿತ್ತು. ರಾಜಭವನದಿಂದ ವಿಧಾನಸೌಧಕ್ಕೆ ಕೇವಲ ಒಂದು ಕಿಲೋಮೀಟರ್ ದೂರವಿದ್ದರೂ, ಅಂದು ಅಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳು ಮತ್ತು ವಿವಿಐಪಿ ಕಾನ್ವೇಗಳ ಓಡಾಟದಿಂದಾಗಿ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು.

ಹಾಗೂ ವಾಹನದಲ್ಲಿ ಹೋದರೆ ಸಚಿವ ಸಂಪುಟ ಸಭೆಗೆ ತಡವಾಗಬಹುದು ಎಂಬ ಮುನ್ಸೂಚನೆ ಸಿಗುತ್ತಿದ್ದಂತೆಯೇ ಕೃಷ್ಣಬೈರೇಗೌಡ ಅವರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡರು. ಸಮಯದ ಮೌಲ್ಯವನ್ನರಿತ ಸಚಿವರು, ತಮ್ಮ ಐಷಾರಾಮಿ ಕಾರನ್ನು ಬಿಟ್ಟು ನಡೆದುಕೊಂಡೇ ವಿಧಾನಸೌಧದತ್ತ ಹೆಜ್ಜೆ ಹಾಕಿದರು. ಸುಮಾರು ಒಂದು ಕಿಲೋಮೀಟರ್ ದೂರವನ್ನು ಕೇವಲ ಹತ್ತು ನಿಮಿಷಗಳಲ್ಲಿ ಕ್ರಮಿಸಿದ ಅವರು, ಯಾವುದೇ ಆಡಂಬರವಿಲ್ಲದೆ ವಿಧಾನಸೌಧದ ಮೆಟ್ಟಿಲು ಹತ್ತಿದರು. ವಿಶೇಷವೆಂದರೆ, ಅವರು ನಡೆದುಕೊಂಡು ಬರುವಾಗ ಅವರ ಸುತ್ತ ಯಾವುದೇ ಹೆಚ್ಚಿನ ಭದ್ರತಾ ಸಿಬ್ಬಂದಿ ಇರಲಿಲ್ಲ ಅಥವಾ ಜನರ ಜಂಗುಳಿಯೂ ಇರಲಿಲ್ಲ. ಒಬ್ಬ ಸಾಮಾನ್ಯ ನಾಗರಿಕನಂತೆ ಸಚಿವರು ನಡೆದುಕೊಂಡು ಬಂದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಕೃಷ್ಣಬೈರೇಗೌಡ ಅವರಿಗೆ ಇಂತಹ ಸರಳತೆ ಹೊಸದೇನಲ್ಲ. ಈ ಹಿಂದೆ ಸಚಿವರಾಗಿದ್ದ ಅವಧಿಯಲ್ಲೂ ಅವರು ಅನೇಕ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲದೆ, ಟ್ರಾಫಿಕ್ ನಡುವೆ ಸಿಲುಕಿದಾಗ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ ಉದಾಹರಣೆಗಳೂ ಇವೆ.

ಬೆಂಗಳೂರಿನಂತಹ ಮಹಾನಗರದಲ್ಲಿ ಸಚಿವರೊಬ್ಬರು ಸೆಕ್ಯೂರಿಟಿ ಇಲ್ಲದೆ ನಡೆದುಕೊಂಡು ಹೋಗುವುದು ಅವರ ಬದ್ಧತೆ ಮತ್ತು ನಿರಾಡಂಬರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ವಿಧಾನಸೌಧ ತಲುಪಿದ ಕೃಷ್ಣಬೈರೇಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಮೊದಲ ದಿನವೇ ಶಿಸ್ತು ಮತ್ತು ಸಮಯಪ್ರಜ್ಞೆ ಮೆರೆದ ಕೃಷ್ಣಬೈರೇಗೌಡ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.