ಮನೆ ರಾಜಕೀಯ ತೆರಿಗೆ ಬಗ್ಗೆ ಗಂಭೀರ ಚಿಂತನೆ ಅಗತ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ

ತೆರಿಗೆ ಬಗ್ಗೆ ಗಂಭೀರ ಚಿಂತನೆ ಅಗತ್ಯ: ವಿಪಕ್ಷ ನಾಯಕ ಸಿದ್ದರಾಮಯ್ಯ

0

ಬೆಂಗಳೂರು: ಜನಸಾಮಾನ್ಯರ ಮೇಲಿನ ತೆರಿಗೆಯ ಭಾರ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯರಿಗಾಗಿ ಇಂದು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ವಿತ್ತೀಯ ಕಲಾಪ, ವಿಧೇಯಕಗಳು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಅಭಿವೃದ್ಧಿಯ ಪಾಲುದಾರಿಕೆ ಕುರಿತು ಅವರು ಮಾತನಾಡಿದರು.

ರಾಜರ ಕಾಲದಲ್ಲಿ ತೆರಿಗೆ ಕಂದಾಯದ ರೂಪದಲ್ಲಿ ಬರುತ್ತಿತ್ತು. ಭೂ ಕಂದಾಯ ಅದರಲ್ಲಿ ಪ್ರಮುಖವಾಗಿತ್ತು. ಶ್ರೀಮಂತರು ಮಾತ್ರ ತೆರಿಗೆ ಕೊಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅನೇಕ ಆರ್ಥಿಕ ತಜ್ಞರು ಈ ಹಿಂದೆ ಪ್ರತಿಪಾದಿಸಿದ್ದರು. ಶ್ರೀಮಂತರಿಂದ ತೆರಿಗೆ ವಸೂಲಿ ಮಾಡಿ ಅದನ್ನು ಬಡವರ ಕಲ್ಯಾಣಕ್ಕೆ ವಿನಿಯೋಗಿಸಬೇಕು ಎಂಬುದು ಅವರ ನಿಲುವು. ಇದು ಕಲ್ಯಾಣ ರಾಷ್ಟ್ರದ ಮೂಲ ತತ್ವವೂ ಆಗಿತ್ತು.

ನಮ್ಮಲ್ಲಿ ಈಗ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇದೆ. ರಾಜನಾದವನು ತೋಟ ಕಾಯುವ ಮಾಲಿ ರೀತಿ ಇರಬೇಕು. ಇದ್ದಿಲು ಮಾರುವ ವ್ಯಾಪಾರಿ ರೀತಿ ಆಗಬಾರದು ಎಂದು ಭೀಷ್ಮ ಧರ್ಮರಾಯನಿಗೆ ಉಪದೇಶ ಮಾಡಿದ್ದರು.

ದುಂಬಿ ಮಕರಂದವನ್ನು ಹೀರಿದಂತೆ, ಹಾಲು ಕರೆಯುವಾಗ ಕುರುವಿಗೂ ಸ್ವಲ್ಪ ಮೀಸಲಿಡುವಂತೆ ತೆರಿಗೆ ವಿಧಿಸಬೇಕು. ಇದರ ಅರ್ಥ ಬಡವರ ಹಿತೃದಷ್ಠಿಯನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ವಿಧಿಸಬೇಕು ಎಂಬುದಾಗಿತ್ತು. ಆದರೆ, ಇತ್ತೀಚೆಗೆ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಬಡವರ ಮೇಲಿನ ತೆರಿಗೆಯ ಹೊರೆ ಹೆಚ್ಚಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಪ್ರಮಾಣ ಶೇ.೭೫ ಹಾಗೂ ಜನ ಸಾಮಾನರ ಮೇಲಿನ ತೆರಿಗೆ ದರ ಶೇ.೨೫ ಇತ್ತು. ಈಗ ಇದು ಅದಲು ಬದಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಬಜೆಟ್ ಅತ್ಯಂತ ಪ್ರಮುಖವಾದದ್ದು. ಕಾಯಕ ಮತ್ತು ದಾಸೋಹ ಇದರ ಅರ್ಥ. ಅಂದರೆ, ಉತ್ಪಾದನೆ ಮತ್ತು ಹಂಚಿಕೆ. ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣರು ಹೀಗೆ ವ್ಯಾಖ್ಯಾನಿಸಿದ್ದರು. ಬಜೆಟ್‌ನಲ್ಲಿನ ಅಂಕಿ-ಅಂಶಗಳು ಅಲಂಕಾರಿಕ ಹಾಗೂ ಪದಗಳ ಪ್ರಯೋಗ ಆಕರ್ಷವಾಗಿದ್ದರೆ ಸಾಲದು. ಮುಂಗಡ ಪತ್ರ ವಾಸ್ತವಿಕತೆಯ ಆಧಾರದ ಮೇಲೆ ರೂಪುಗೊಳ್ಳಬೇಕು ಎಂದರು.

ವಿಧೇಯಕಗಳ ಮಹತ್ವದ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಸಾಮಾಜಿಕ ನ್ಯಾಯ ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ವಿಧೇಯಕಗಳನ್ನು ರೂಪಿಸಬೇಕು. ಶಾಸಕರು ಅದರಲ್ಲಿ ತಪ್ಪದೇ ಭಾಗಿಯಾಗಬೇಕು. ಮೊದಲ ಬಾರಿ ಶಾಸಕರಾದವರು ನಾವು ಒಂದು ಬಾರಿ ವಿಧಾನಸೌಧದ ಮೆಟ್ಟಿಲು ಹತ್ತಿದರೆ ಸಾಕು ಎನ್ನುತ್ತಾರೆ. ಒಂದು ಬಾರಿ ವಿಧಾನಸೌಧ ಪ್ರವೇಶಿಸಿದ ಬಳಿಕ ಅತ್ತ ಸುಳಿಯುವುದಿಲ್ಲ. ವಿಧಾನ ಮಂಡಲದ ಕಾರ್ಯ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವ ಜೆ.ಸಿ. ಮಾಧುಸ್ವಾಮಿ ಭಾಗವಹಿಸಿದ್ದರು.

ಹಿಂದಿನ ಲೇಖನವಿಷಯದ ಜ್ಞಾನದ ಜೊತೆ ಕೌಶಲ್ಯವೂ ಮುಖ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮುಂದಿನ ಲೇಖನಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ