ಮನೆ ರಾಜಕೀಯ ಇಂಧನ, ಅಡುಗೆ ಅನಿಲ ಬೆಲೆ ಏರಿಕೆ: ಕಾಂಗ್ರೆಸ್ ನಿಂದ ದೇಶಾದ್ಯಂತ ಧರಣಿ

ಇಂಧನ, ಅಡುಗೆ ಅನಿಲ ಬೆಲೆ ಏರಿಕೆ: ಕಾಂಗ್ರೆಸ್ ನಿಂದ ದೇಶಾದ್ಯಂತ ಧರಣಿ

0

ನವದೆಹಲಿ:  ಕಳೆದ ಹತ್ತು ದಿನಗಳಲ್ಲಿ ತೈಲ ಬೆಲೆ ಹಾಗೂ ಅಡುಗೆ ಅನಿಲದ ಬೆಲೆಯು ನಿರಂತರವಾಗಿ ಏರಿಕೆಯಾಗಿದ್ದು, ಇದನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ವಿಜಯ್ ಚೌಕ್ ಮುಂದೆ ಕಾಂಗ್ರೆಸ್ ಸಂಸದರು ಗುರುವಾರ ಧರಣಿ ನಡೆಸಿದರು.

ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಇದರೊಂದಿಗೆ ಕಾಂಗ್ರೆಸ್ ನಾಯಕರು ಸಿಲೆಂಡರ್, ದ್ವಿಚಕ್ರ ವಾಹನ ಮುಂದಿಟ್ಟು ಅದಕ್ಕೆ ಹೂವಿನ ಹಾರ ಹಾಕಿ ಸಹ ಧರಣಿ ನಡೆಸಿ ಗಮನ ಸೆಳೆದರು.

ಧರಣಿಯಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.

ಇಂಧನ, ಅಡುಗೆ ಅನಿಲ ಸೇರಿದಂತೆ ಹಣದುಬ್ಬರ ವಿರುದ್ಧ ಕಾಂಗ್ರೆಸ್ ವಾರದವರೆಗೆ ದೇಶಾದ್ಯಂತ ಪ್ರತಿಭಟನೆ ಕೈಗೊಳ್ಳಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಪ್ರತಿ ಲೀಟರ್‌ಗೆ 6.40 ರೂಪಾಯಿಯಷ್ಟು ಹೆಚ್ಚಳವಾಗಿದೆ. ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.

ನಾಲ್ಕೂವರೆ ತಿಂಗಳ ನಂತರ ಕಳೆದ 10 ದಿನಗಳಲ್ಲಿ ಸತತ 9 ಬಾರಿ ಇಂಧನ ಬೆಲೆ ಹೆಚ್ಚಳವಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಾಹುಲ್ ಗಾಂಧಿ, ಇಂದು ಕಾಂಗ್ರೆಸ್ ಪಕ್ಷ ದೆಹಲಿ ಸೇರಿದಂತೆ ಪ್ರತಿ ರಾಜ್ಯಗಳಲ್ಲಿ ಪ್ರತಿ ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಕೂಡ ಅಡುಗೆ ಅನಿಲ, ಇಂಧನ ಬೆಲೆ ಏರಿಕೆ ಖಂಡಿಸಿ ಧರಣಿ ನಡೆಸುತ್ತಿದೆ. ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕುವವರೆಗೆ ಕಾಂಗ್ರೆಸ್ ಪಕ್ಷದ ನಾಯಕರ ಧರಣಿ ಮುಂದುವರಿಯಲಿದೆ, ಈ ಬಗ್ಗೆ ಸಂಸತ್ತಿನಲ್ಲಿ ಸೋಮವಾರ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

ಹಿಂದಿನ ಲೇಖನಸಮೋಸಾ  ಬೆಲೆ ಹೆಚ್ಚಾಯಿತೆಂದು ಕೆಲಸಕ್ಕೆ ರಾಜೀನಾಮೆ ನೀಡಿದ ಲಾಯರ್
ಮುಂದಿನ ಲೇಖನಬೆಂಗಳೂರಿನ ಹೋಟೆಲ್ ನಲ್ಲಿ ಅಗ್ನಿ ಅವಘಡ: ಪೀಠೋಪಕರಣಗಳು ಬೆಂಕಿಗಾಹುತಿ