ಮನೆ ರಾಜಕೀಯ ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯದಿಂದ ನಿವೃತ್ತಿ: ರಮೇಶ್ ಜಾರಕಿಹೊಳಿ

ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯದಿಂದ ನಿವೃತ್ತಿ: ರಮೇಶ್ ಜಾರಕಿಹೊಳಿ

0

ಚಿಕ್ಕೋಡಿ (ಬೆಳಗಾವಿ): ಒಂದು ವೇಳೆ ಮಹೇಶ್ ಕುಮಟಳ್ಳಿ ಟಿಕೆಟ್ ಕೊಡದಿದ್ದರೆ ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಎಂದು ಜಲ ಸಂಪನ್ಮೂಲ ಇಲಾಖೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ ಮುಂದಿನ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಎಂದು ಹೇಳಿದರು.

ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ತಪ್ಪುವಂತಹ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿ ಪಕ್ಷದಲ್ಲಿ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಟಳ್ಳಿ, ಗೋಕಾಕನಿಂದ ರಮೇಶ್ ಜಾರಕಿಹೊಳಿ, ಕಾಗವಾಡನಿಂದ ಶ್ರೀಮಂತ ಪಾಟೀಲ್ ಸ್ವರ್ಧೆ ಮಾಡುತ್ತಿದ್ದು, ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಲಕ್ಷ್ಮಣ್ ಸವದಿ ಬುದ್ದಿವಂತ ರಾಜಕಾರಣಿ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಐದು ವರ್ಷ ವಿಧಾನ ಪರಿಷತ್​ ಸದಸ್ಯನಾಗಿದ್ದು ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತಾರೆ ಎಂಬುದು ನನಗೆ ಅಚ್ಚರಿಯಾಗಿದೆ ಹೇಳಿದರು.

ಆರ್​’ಎಸ್’ಎಸ್ ಮುಖಂಡರ ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಭೇಟಿಗೆ ಯಾವುದೇ ವಿಶೇಷ ಅರ್ಥವಿಲ್ಲ. ನಮ್ಮ ಹಿರಿಯರನ್ನು ಭೇಟಿಯಾಗಿದ್ದೇನೆ. ಇದೊಂದು ಸೌಜನ್ಯ ಭೇಟಿ ಎಂದು ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊನ್ನೆ ದೆಹಲಿಯಲ್ಲಿ ಭೇಟಿ ಮಾಡಿದ್ದೆ. ಕೆಲವು ವಿಚಾರಗಳನ್ನು ಹೇಳಲು ಆಗುವುದಿಲ್ಲ. ನಾನು ಅವರ ಮುಖಾಂತರ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ತುಂಬಾ ದಿನದಿಂದ ಅವರನ್ನು ಭೇಟಿ ಆಗಿರಲಿಲ್ಲ. ಹಾಗಾಗಿ ಭೇಟಿ ಮಾಡಿ ಬಂದಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಮಾರ್ಚ್​ 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಲಿದ್ದು, ಈ ವೇಳೆ ಸುಮಾರು 1250 ಕೋಟಿ ರೂಪಾಯಿ ವೆಚ್ಚದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಹಿಂದಿನ ಲೇಖನಪಂಚಮಸಾಲಿ ಲಿಂಗಾಯತರು, ಒಕ್ಕಲಿಗರ ಕಿವಿ ಮೇಲೆ ಹೂವಿಟ್ಟ ಬಿಜೆಪಿ ಸರ್ಕಾರ: ಕಾಂಗ್ರೆಸ್ ಕಿಡಿ
ಮುಂದಿನ ಲೇಖನವರಿಷ್ಠರ ತೀರ್ಮಾನದಂತೆ ನಡೆಯುತ್ತೇನೆ: ವಿನಯ್ ಕುಲಕರ್ಣಿ