ಮನೆ ಕ್ರೀಡೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನೂಕುನುಗ್ಗಲು: ಆರ್‌ಸಿಬಿ ವಿಜಯೋತ್ಸವದಲ್ಲಿ ಅವ್ಯವಸ್ಥೆ : ಯುವಕನಿಗೆ ಕಾಲು ಮುರಿತ, ಮಹಿಳೆ...

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನೂಕುನುಗ್ಗಲು: ಆರ್‌ಸಿಬಿ ವಿಜಯೋತ್ಸವದಲ್ಲಿ ಅವ್ಯವಸ್ಥೆ : ಯುವಕನಿಗೆ ಕಾಲು ಮುರಿತ, ಮಹಿಳೆ ಅಸ್ವಸ್ಥ

0

ಬೆಂಗಳೂರು: ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಟಗಾರರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ.

ವಿಜಯೋತ್ಸವದ ಅಂಗವಾಗಿ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರಿ ಮಟ್ಟದ ಅಭಿನಂದನಾ ಸಮಾರಂಭ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಅಭಿಮಾನಿಗಳು ನಗರದ ವಿವಿಧ ಭಾಗಗಳಿಂದ ಬಂದಿದ್ದರು. ವಿಧಾನಸೌಧದ ಮುಂದೆ ‘ಆರ್‌ಸಿಬಿ ಆರ್‌ಸಿಬಿ’ ಎನ್ನುವ ಹರ್ಷದ್ಗೋರ ಮುಗಿಲುಮುಟ್ಟಿದೆ.

ಈ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನತ್ತ ಜನಸಾಗರವೇ ಹರಿದುಬಂದಿದೆ. ಚಿನ್ನಸ್ವಾಮಿ ಸ್ಟೇಡಿಯಂ ಫುಲ್ ಆಗಿದ್ದು, ಒಳಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ, ಜನರು ಒಳಗೆ ನುಗ್ಗಲು ತಳ್ಳಾಟ ನಡೆಸುತ್ತಿದ್ದಾರೆ. ಸ್ಟೇಡಿಯಂ ಹೊರಗೂ ಜನಸಾಗರವೇ ಸೇರಿದ್ದು ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಮುಂದೆ ಹೋಗಲಾಗದೆ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲಿ ನೋಡಿದರೂ ಆರ್​ಸಿಬಿ ಆರ್​ಸಿಬಿ ಎಂಬ ಘೋಷಣೆಗಳೇ ಕೇಳುತ್ತಿದ್ದು, ಆರ್​ಸಿಬಿ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಎದುರು, ವಿಶೇಷವಾಗಿ ಗೇಟ್ ನಂ.12 ಬಳಿ, ಅಭಿಮಾನಿಗಳ ಭಾರೀ ಗುಂಪು ಕಿಕ್ಕಿರಿದು ಸೇರಿದ್ದ ಕಾರಣ ನೂಕುನುಗ್ಗಲು ಉಂಟಾಯಿತು. ಗೇಟ್​ ನಂಬರ್ 6ರ ಬಳಿ ಗೇಟ್ ಹತ್ತಲು ಹೋದ ಯುವಕ ಬಿದ್ದು ಕಾಲು ಮುರಿದುಕೊಂಡಿದ್ದಾನೆ. ಜನರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ನೂಕುನುಗ್ಗಲಿನಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಪೊಲೀಸರು ತಮ್ಮ ಜೀಪ್​ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಗೇಟ್ ನಂಬರ್ 12ರಲ್ಲಿ ಮಹಿಳಾ ಅಭಿಮಾನಿಯೊಬ್ಬರು ಕುಸಿದುಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.