ಮನೆ ಕಾನೂನು ಮಲ ಹೊರುವ ಪದ್ದತಿ ನಿಷೇಧ ಕಾನೂನಿನ ಸಮರ್ಥ ಜಾರಿಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಹೊಸ ನಿರ್ದೇಶನ

ಮಲ ಹೊರುವ ಪದ್ದತಿ ನಿಷೇಧ ಕಾನೂನಿನ ಸಮರ್ಥ ಜಾರಿಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಹೊಸ ನಿರ್ದೇಶನ

0

ಮಲ ಹೊರುವ ಉದ್ಯೋಗ ನಿಷೇಧ ಮತ್ತು ಮಲ ಹೊರುವವರ ಪುನರ್’ವಸತಿ ಕಾಯಿದೆ- 2013 ಮತ್ತು ಮಲ ಹೊರುವ ಉದ್ಯೋಗ ಮತ್ತು ಒಣ ಶೌಚಾಲಯಗಳ ನಿರ್ಮಾಣ (ನಿಷೇಧ) ಕಾಯಿದೆ- 1993ನ್ನು ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನಗಳನ್ನು ನೀಡಿದೆ.

(ಡಾ. ಬಲರಾಮ್ ಸಿಂಗ್ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ).

ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ಪ್ರಕರಣಕ್ಕೆ ಸಹಾಯ ಮಾಡುವ ಸಲುವಾಗಿ ವಕೀಲ ಕೆ ಪರಮೇಶ್ವರ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು.

ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನೀಡಿರುವ ನಿರ್ದೇಶನಗಳು:

(I) ಮಲ ಹೊರುವ ಉದ್ಯೋಗ ನಿಷೇಧ ಮತ್ತು ಮಲ ಹೊರುವವರ ಪುನರ್ವಸತಿ ಕಾಯಿದೆ- 2013ರ ಕಾಯಿದೆ ಜಾರಿಯ ಸ್ಥಿತಿಗತಿ ಅಂದರೆ ಈ ಕಾಯಿದೆಯಲ್ಲಿ ಹೇಳಲಾದ ʼಮಲ ಹೊರುವವರುʼ ಎಂಬ ಪದದ ವ್ಯಾಖ್ಯಾನಕ್ಕೊಳಪಡುವ ವ್ಯಕ್ತಿಗಳ ಪುನರ್ವಸತಿಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿವಾದಿಯಾಗಿರುವ ಭಾರತ ಒಕ್ಕೂಟ (ಕೇಂದ್ರ ಸರ್ಕಾರ) ಕೈಗೊಂಡ ಕ್ರಮಗಳನ್ನು ದಾಖಲೆಯಲ್ಲಿ ಸಲ್ಲಿಸತಕ್ಕದ್ದು.

(II) ರಾಜ್ಯವಾರು ಒಣ ಶೌಚಗೃಹಗಳ ನಿರ್ಮೂಲನೆ/ತೆರವಿನ ಕುರಿತಂತೆ  ಕಡೆಗೆ ತೆಗೆದುಕೊಂಡ ಕ್ರಮಗಳು.

(III) ಸೇನೆಗೆ ಸಂಬಂಧಿಸಿದ ಕಂಟೋನ್ಮೆಂಟ್ ಬೋರ್ಡ್’ಗಳು ಮತ್ತು ರೈಲ್ವೆಗಳಲ್ಲಿ ಒಣ ಶೌಚಾಲಯ ಹಾಗೂ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ.

(IV) ನೇರವಾಗಿ ಅಥವಾ ಪರೋಕ್ಷವಾಗಿ ಅಂದರೆ ಗುತ್ತಿಗೆದಾರರ ಮೂಲಕ ಅಥವಾ ಬೇರೆ ವಿಧದಲ್ಲಿ ರೈಲ್ವೇ ಮತ್ತು ಕಂಟೋನ್ಮೆಂಟ್ ಬೋರ್ಡ್’ಗಳಲ್ಲಿ ಸಫಾಯಿ ಕರ್ಮಚಾರಿಗಳು ಮಾಡುತ್ತಿರುವ ಉದ್ಯೋಗದ ಸ್ಥಿತಿಗತಿ.

(V) ಪುರಸಭೆಗಳ ರಾಜ್ಯವಾರು ಸ್ಥಾಪನೆ ಮತ್ತು ಕೊಳಚೆನೀರನ್ನು ಯಂತ್ರಾಧಾರಿತವಾಗಿ ಶುಚಿಗೊಳಿಸಲು   ಆ ಸಂಸ್ಥೆಗಳು ನಿಯೋಜಿಸಿದ ಸಲಕರಣೆಗಳ ಸ್ವರೂಪ (ಹಾಗೆಯೇ ತಾಂತ್ರಿಕ ಸಾಧನಗಳ ವಿವರಣೆ).

(VI) ಮಲ ಹೊರುವ ಪದ್ದತಿಯಿಂದ ಉಂಟಾಗುವ ಕಾರ್ಮಿಕರ ಸಾವುಗಳನ್ನು ಲೆಕ್ಕಿಸುವುದಕ್ಕಾಗಿ ಅಂತರ್ಜಾಲ ಆಧಾರಿತ ಪರಿಹಾರೋಪಾಯ ಅಭಿವೃದ್ಧಿಗೊಳಿಸುವ ಕಾರ್ಯಸಾಧ್ಯತೆ ಮತ್ತು ಸಾವನ್ನಪ್ಪಿದ ಕಾರ್ಮಿಕರ ಪುನರ್’ವಸತಿಗೆ ಸಂಬಂಧಪಟ್ಟ ಅಧಿಕಾರಿಗಳು ಕೈಗೊಂಡ ಕ್ರಮಗಳ ವಿವರಣೆ ನೀಡಬೇಕು.

ತಾನು ಎತ್ತಿರುವ ಪ್ರಶ್ನೆಗಳ ಬಗ್ಗೆ ಮಾಹಿತಿ ಇರುವ ಅಫಿಡವಿಟ್’ಅನ್ನು ಏಪ್ರಿಲ್ 12, 2023ರೊಳಗೆ ಸಲ್ಲಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ನ್ಯಾಯಾಲಯ ಸೂಚಿಸಿದೆ. ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಹಾಗೂ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಪ್ರತಿವಾದಿಗಳನ್ನಾಗಿ ಸೇರಿಸಲಾಗಿದೆ.

ಮಲ ಹೊರುವ ಪದ್ದತಿ ನಿಷೇಧಕ್ಕೆ ಸಂಬಂಧಿಸಿದಂತೆ ಈ ಎರಡು ಕಾಯಿದೆಗಳನ್ನು ಸಮರ್ಥವಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರಾದ ಡಾ.ಬಲರಾಮ್ ಸಿಂಗ್ ಕೋರಿದ್ದಾರೆ.

ಹಿಂದಿನ ಲೇಖನ‘ಆರ್‌’ಆರ್‌’ಆರ್’: 4 ವಿಭಾಗಗಳಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್
ಮುಂದಿನ ಲೇಖನಚೊಚ್ಚಲ ವನಿತಾ ಪ್ರೀಮಿಯರ್ ಲೀಗ್: ನೂತನ ಜೆರ್ಸಿ ಬಿಡುಗಡೆ ಮಾಡಿದ ಮುಂಬೈ ಇಂಡಿಯನ್ಸ್