ಬೆಂಗಳೂರು: ಭಾರತದ ಸಂವಿಧಾನ ಕೇವಲ ವಕೀಲರು ಓದುವ ದಾಖಲೆಯಾಗಬಾರದು. ಇದನ್ನು ಪ್ರತಿ ಭಾರತೀಯ ಮಕ್ಕಳು ಅಧ್ಯಯನ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಿವಿಮಾತು ಹೇಳಿದರು.
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 73 ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತದ ಸರ್ವಶ್ರೇಷ್ಠ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನವಿದು. ಇಡೀ ವಿಶ್ವದಲ್ಲಿ ನಮ್ಮ ಸಂವಿಧಾನ ಅತಿ ದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ತಂಡವನ್ನು ಇಂದು ಸ್ಮರಿಸಬೇಕು. ಸಮಾಜದ ಅಸಮಾನತೆ ನಿವಾರಿಸಿ, ಅಸಮಾನತೆ, ಸಹಬಾಳ್ವೆ, ಸಾಮಾಜಿಕ ಸಮಾನತೆ, ಸೋದರತೆ ಎಲ್ಲವನ್ನೂ ಒಳಗೊಂಡ ಸಂವಿಧಾನವನ್ನು ಕೊಟ್ಟ ಈ ಮಹನೀಯರಿಗೆ ಕೋಟಿ ನಮನಗಳನ್ನು ಅರ್ಪಿಸಬೇಕು. ಜೊತೆಗೆ ಪ್ರತಿ ಭಾರತೀಯ ಇದನ್ನು ಅಧ್ಯಯನ ಮಾಡಬೇಕು. ಮಕ್ಕಳು ಕೂಡ ಅಧ್ಯಯನ ಮಾಡಲು ಪ್ರೇರಣೆ ನೀಡಬೇಕು ಎಂದರು.
ಬ್ರಿಟಿಷರು ದೇಶದ ಬಿಟ್ಟು ಹೋಗುವಾಗ ನಾವೇ ಸಂವಿಧಾನ ಮಾಡಿಕೊಡುತ್ತೇವೆ ಎನ್ನುತ್ತಾರೆ. ಆದರೆ ನಮಗೆ ಆ ಬುದ್ಧಿವಂತಿಕೆ ಇದೆ, ಸಾಮಥ್ರ್ಯ ಇದೆ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಾರೆ. ನಂತರ ವಿಶ್ವವೇ ಹೆಮ್ಮೆ ಪಡುವ ಸಂವಿಧಾನ ರಚನೆಯಾಗುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಹಂಚಿಹೋದ ರಾಜ್ಯಗಳನ್ನು ಒಂದುಗೂಡಿಸಿ ಐಕ್ಯತೆ ಮೂಡಿಸಿದ್ದರು. ಆದರೆ ನಾವು ಅವರಿಗೆ ಮಾನ್ಯತೆ, ಗೌರವ ಸಿಕ್ಕಿರಲಿಲ್ಲ. ಈ ಲೋಪ ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಅವರ ಪ್ರತಿಮೆ ನಿರ್ಮಿಸಿದ್ದಾರೆ. ಅಹಿಂಸೆಯ ಹೋರಾಟದಿಂದಲೇ ಬ್ರಿಟಿಷರು ದೇಶ ಬಿಟ್ಟು ಹೋದರು ಎಂಬುದು ಎಷ್ಟು ಸತ್ಯವೋ, ನೇತಾಜಿ ಸುಭಾಷ್ ಚಂದ್ರ ಬೋಸ್ ನೇತೃತ್ವದ ಸೇನೆ ಭಯ ಹುಟ್ಟಿಸಿದ್ದು ಕಾರಣ ಎಂಬುದು ಕೂಡ ಅಷ್ಟೇ ಸತ್ಯ. ಅವರ ಸ್ಮರಣಾರ್ಥ ಇಂಡಿಯಾ ಗೇಟ್ ನಲ್ಲಿ ಕೇಂದ್ರ ಸರ್ಕಾರ ಪ್ರತಿಮೆ ಸ್ಥಾಪಿಸುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ಯುವಪೀಳಿಗೆ ಇವರ ಚರಿತ್ರೆಯನ್ನು ಸದಾ ಸ್ಮರಿಸುವಂತಾಗಲಿದೆ ಎಂದರು.















