ಮನೆ ಭಾವನಾತ್ಮಕ ಲೇಖನ ಮನದೊಳಗಿನ ಭಾವನಾತೀತ ಬದುಕು

ಮನದೊಳಗಿನ ಭಾವನಾತೀತ ಬದುಕು

0

ಕಾರ್ಮೋಡ ಮುಸುಕಿ ಕರಗಿ ಧುತ್ತೆಂದು ಸುರಿದ ಮುಂಗಾರು ಮಳೆಯಿಂದ ಧರೆಗೆ ಒಂದಿಷ್ಟು ತಣ್ಣನೆಯ ಸಿಂಚನವಾದಾಗ, ಧರೆಯು ಸದಾ ಹೀಗೆಯೇ ತಂಪಾಗಿದ್ದು, ಹಸಿರುಟ್ಟು ನಲಿವಿನಿಂದ ಮೆರೆವಂತಿದ್ದರೆ ಎಷ್ಟು ಚೆನ್ನ ಎಂದು ಭಾವಿಸುತ್ತದೆ. ಆದರೆ ಹಾಗಾಗಲು ಸಾಧ್ಯವೆ? ಮುಂಗಾರಲ್ಲಿಚೆಲುವಿನಿಂದ ನಗುವ ಭೂಮಿ ಬೇಸಿಗೆಯಲ್ಲಿಬಾಡುತ್ತದೆ. ಅಂತೆಯೇ ನಮ್ಮ ಬದುಕೂ ಕೂಡ. ಜೀವನದಲ್ಲಿಎಲ್ಲವೂ ಒಳ್ಳೆಯದೇ ಆಗುತ್ತಿದ್ದರೆ, ಎಲ್ಲರೂ ನಮ್ಮನ್ನು ಪ್ರೀತಿಸಲು ಪ್ರಾರಂಭಿಸಿದರೆ, ನಮಗೆ ಯಾರೂ ಶತ್ರುಗಳು ಇಲ್ಲವಾದರೆ, ಹಣ, ಆರೋಗ್ಯ, ಐಶ್ವರ್ಯ ಎಲ್ಲವೂ ಸಿಕ್ಕಿದರೆ ಆಗ ಹೇಗಿರುತ್ತದೆ ಜೀವನ? ಭ್ರಮೆ ಎನಿಸುತ್ತದೆಯಲ್ಲವೆ!

ಒಳಮನಸಿನಿಂದ ಖುಷಿಯಾಗಿ

ಇಂತಹವು ಎಂದಿಗೂ ನಮ್ಮ ಜೀವನದಲ್ಲಿನಡೆಯುವುದಿಲ್ಲ. ಇಂತಹ ನಿರೀಕ್ಷೆಗಳು ಕನಸಿಗಷ್ಟೆ ಸೀಮಿತ. ಮನುಷ್ಯನಿಗೆ ಕಾರ್ಮೋಡ ಕವಿದು ಕಷ್ಟಗಳು ಬರುವುದು, ಅದು ಕರಗಿ ತಂಪನೆಯ ಸುಖ ಬರುವುದು ಸರ್ವೆ ಸಾಮಾನ್ಯ. ಆದರೆ ಅವೆಲ್ಲವುಗಳನ್ನು ಎದುರಿಸಿ ಕರಗಿಸಿ ಆನಂದವಾಗಿರುವುದು ನಮ್ಮ ಕೈಯಲ್ಲೇ ಇದೆ. ಸಂತೋಷ ಹೊರಗಿನಿಂದ ಬರುವುದಲ್ಲ. ಅದು ನಮ್ಮ ಮನಸಿನ ಒಳಗಿನ ಒಂದು ಭಾವನೆ. ಸದಾ ಸಂತೋಷದಿಂದ ಇರುವುದನ್ನು ಕಲಿತು ಬಿಟ್ಟರೆ ನಮ್ಮ ಜೀವನದಲ್ಲಿಎಂತಹ ಕಷ್ಟವನ್ನಾದರೂ ಎದುರಿಸಬಹುದು.

ಮನಸಿನ ಖುಷಿ

ದೇವರು ಮಾನವನಿಗೆ ಶಕ್ತಿಶಾಲಿ ಮೆದುಳು ಕೊಟ್ಟಿದ್ದಾನೆ. ಇದನ್ನು ಉಪಯೋಗಿಸಿಕೊಂಡು ಹೊಟ್ಟೆ ಬಟ್ಟೆಗೆ ಒಂದು ದಾರಿ ಮಾಡಿಕೊಂಡರೆ ಅರ್ಧ ಸಮಸ್ಯೆ ದೂರ. ಇನ್ನುಳಿದಿದ್ದು ಜನರ ಮಾತು. ಅದಕ್ಕೆ ತಲೆಕೆಡಿಸಿಕೊಳುವುದು ಬೇಡ. ಯಾರ ಮೇಲೂ ನಮ್ಮ ಸಂತೋಷ ನಿರ್ಧಾರಿತವಾಗಬಾರದು. ಯಾರು ಇರಲಿ ಅಥವಾ ಇಲ್ಲದಿರಲಿ, ಒಂಟಿಯಾಗಿದ್ದಾಗಲೂ ಖುಷಿಯಿಂದ ಇರಬೇಕು.ಅದಕ್ಕಾಗಿ ಮೊದಲ ಮನಸನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನು ಕಲಿಯಬೇಕು.

ಇದು ಧ್ಯಾನಯೋಗದ ಮೂಲಕ ಇದು ಸಾಧ್ಯವಾಗುತ್ತದೆ. ಇದರಿಂದ ಮನಸು ಹತೋಟಿಗೆ ಬರುತ್ತದೆ. ನಾವೆಲ್ಲಸಂತೋಷದ ಚಿಲುಮೆಯಾಗಿ ಸದಾ ಸಂತೋಷವನ್ನು ಹರಡುತ್ತಿರಬೇಕು. ಆಗ ನಮ್ಮವರೆಲ್ಲಖುಷಿಯಾಗಿ ಇರುತ್ತಾರೆ. ನಾವು ಖುಷಿಯಾಗಿದ್ದರೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಮಾಡುವ ಕೆಲಸದಲ್ಲೂಯಶಸ್ಸು ಸಿಗುತ್ತದೆ. ನಾವು ಕಷ್ಟದಿಂದ, ದುಃಖದಿಂದ ಆಕಾಶ ಕಳಚಿ ಬಿದ್ದಂತೆ ಇದ್ದರೆ ಯಾರೂ ನಮ್ಮನ್ನು ತಿರುಗಿ ನೋಡುವುದಿಲ್ಲ. ನಾವು ನರಳುವುದರಿಂದ ನಮಗಾಗಲೀ ಬೇರೆಯವರಿಗಾಗಲಿ ಪ್ರಯೋಜನವಿಲ್ಲ. ಮೊದಲು ನಾವು ಭಾವನೆಗಳಿಂದಲೇ ಬದುಕುವುದನ್ನು ನಿಲ್ಲಿಸಿ ಖುಷಿಯಿಂದ ಇರುವುದನ್ನು ಕಲಿಯಬೇಕು.

ಪ್ರಾಮಾಣಿಕ ಸಂತಸವಿರಲಿ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ, ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಗೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಡಿ.ವಿ.ಜಿ.ಯವರ ಕಗ್ಗವನ್ನು ನಾವು ಎಂದು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳುತ್ತೇವೋ ಆಗ ನಮ್ಮ ಜೀವನ ಸರಳವಾಗುತ್ತದೆ. ಖ್ಯಾತಿ, ಹೆಸರು ಇವುಗಳ ಹಿಂದೆ ಹೋಗುವುದಕ್ಕಿಂತ ನಿಜವಾದ ಸಾಧನೆ ಮಾಡುವುದರ ಕುರಿತು ನಾವು ಗಮನಹರಿಸಬೇಕು. ಸಾಧನೆಗಳ ಕುರಿತು ಸಂತಸವಿರಲಿ.ಅದನ್ನು ಇತರರೊಂದಿಗೆ ಹಂಚಿಕೊಳ್ಳಿ. ಆದರೆ ಅಹಂಕಾರ ಬೇಡ. ಎಷ್ಟು ಸಹಜವಾಗಿರುತ್ತೇವೋ, ಅಷ್ಟು ಜನರಿಗೆ ಹತ್ತಿರವಾಗುತ್ತೇವೆ. ಎಷ್ಟು ಪ್ರಾಮಾಣಿಕರಾಗಿರುತ್ತೇವೋ, ಅಷ್ಟು ಕೃತಕತೆಯಿಂದ ಕಳಚಿಕೊಳುತ್ತೇವೆ. ಜೊತೆಗೆ ಅಪರಾಧಿ ಪ್ರಜ್ಞೆಯಿಂದಲೂ ದೂರವಾಗಬಹುದು.

ಪರರ ಕಷ್ಟ ಸುಖಗಳಲ್ಲಿಭಾಗಿಯಾಗುವುದನ್ನು ಕಲಿತಾಗ ನಮಗೆ ಬರುವಂತಹ ಕಷ್ಟಗಳ ಅರಿವು ನಮ್ಮದಾಗಿ ಅವುಗಳನ್ನು ಎದುರಿಸುವಂತಹ ಶಕ್ತಿ ನಮ್ಮಲ್ಲಿಮೂಡುತ್ತದೆ. ಕೃತಕ ನಗುವಿನಿಂದ ಇರುವ ಬದಲು ಪ್ರಾಮಾಣಿಕವಾಗಿ ನಗುವುದನ್ನು ಕಲಿತಾಗ ಬದುಕು ಹಸನ್ಮುಖಿಯಾಗುತ್ತದೆ.

ಭಾವನೆಗಳು ಮುಖ್ಯ. ಆದರೆ ಭಾವನೆಗಳೇ ಬದುಕಾಗಬಾರದು. ಜೀವನದಲ್ಲಿಬರುವಂತಹ ಎಲ್ಲವನ್ನೂ ಸಮನಾಗಿ ಬೇವು ಬೆಲ್ಲದಂತೆ ಸ್ವೀಕರಿಸುವ ಮನಸ್ಥಿತಿ ನಮ್ಮದಾಗಬೇಕು. ಆಗ ಒಳಮನಸು ಗಟ್ಟಿಗೊಳ್ಳುತ್ತದೆ. ಎಂತಹ ಸಂದರ್ಭದಲ್ಲೂಎದೆಗುಂದದೆ ಮುನ್ನುಗ್ಗುವ ಛಲ ಮೂಡುತ್ತದೆ. ಸಿಹಿ ಹೆಚ್ಚಾದಾಗ ಕಾಯಿಲೆ ಬರುವಂತೆ ಬರಿಯ ಬೆಲ್ಲದ ಬದುಕು ನಮ್ಮದಾದರೆ ಕಷ್ಟಗಳ ಸರಮಾಲೆ ಕಾಡುತ್ತದೆ.

ಮುಂಗಾರಲ್ಲಿಹಸಿರುಟ್ಟು ನಗುವ ಧರೆಯಂತೆ ನಮ್ಮ ಬದುಕು ಸದಾ ಸಂತೋಷದಿಂದಿರುತ್ತದೆ.ಸೂರ್ಯನಿಗೂ ಗ್ರಹಣ ಕವಿದು ಬಿಡುವಂತೆ, ನಮ್ಮ ಬದುಕಿಗೂ ಒಮ್ಮೊಮ್ಮೆ ಗ್ರಹಣ ಕವಿಯುತ್ತದೆ. ಆದರೆ ಅದಕ್ಕೆ ಎದೆಗುಂದಬಾರದಷ್ಟೆ. ಆಗ ಮಾತ್ರ ನಮ್ಮ ಬದುಕಲ್ಲಿಯಶಸ್ಸು ಕಾಣಬಹುದು. ಆದ್ದರಿಂದ ಎಲ್ಲವೂ ನಮ್ಮ ಕೈಯಲ್ಲೇ ಇದೆ ಎಂಬುದನ್ನು ಅರಿತು ಬದುಕುವುದನ್ನು ಕಲಿಯಬೇಕಿದೆ.

ಹಿಂದಿನ ಲೇಖನಜಾನಪದ ಸಂಸ್ಕೃತಿ ಉಳಿಸುವುದು ಎಲ್ಲರ ಜವಾಬ್ದಾರಿ: ನಟ ಕಾರ್ತಿಕ್ ಮಹೇಶ್
ಮುಂದಿನ ಲೇಖನಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಶೇ.100 ಸಾಧನೆ ಗುರಿ: ಡಿಡಿಪಿಐ ರಾಮಚಂದ್ರರಾಜೇ ಅರಸ್‌