ಮನೆ ಅಪರಾಧ ರಾಮನಗರ: ಮಹಿಳೆಯ ಬರ್ಬರ ಹತ್ಯೆ

ರಾಮನಗರ: ಮಹಿಳೆಯ ಬರ್ಬರ ಹತ್ಯೆ

0

ರಾಮನಗರ(Ramnagar): ಮೇಯಲು ಬಿಟ್ಟಿದ್ದ ಹಸುಗಳನ್ನು ಮನೆಗೆ ಕರೆದುಕೊಂಡು ಬರಲು ಹೋದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಅಚ್ಚಲು ಕಾಲೋನಿಯಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಕೆಂಪಮ್ಮ(50) ಎಂದು ಗುರುತಿಸಲಾಗಿದೆ.

ಕೆಂಪಮ್ಮನ ಗಂಡ ಕೆಂಚಪ್ಪನಿಗೆ ಒಂದು ಕಾಲು ಇಲ್ಲ. ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಂಚಪ್ಪ ಆಟೋ ಓಡಿಸುತ್ತಾರೆ. ಕೆಂಪಮ್ಮ ಗ್ರಾಮದಲ್ಲಿ ಸಣ್ಣದಾದ ಕಿರಾಣಿ ಇಟ್ಟುಕೊಂಡು ನಾಲ್ಕೈದು ಹಸುಗಳನ್ನು ಸಾಕಿಕೊಂಡು ಬದುಕು ನಡೆಸುತ್ತಿದ್ದರು. ಪ್ರತಿದಿನ ಬೆಳಗ್ಗೆ ಗ್ರಾಮದ ಸಮೀಪವೇ ಇರುವ ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದಲ್ಲಿ ಹಸುಗಳನ್ನು ಮೇಯಲು ಬಿಡುತ್ತಿದ್ದರು.

ಹಸುಗಳನ್ನು ವಾಪಸ್ ಮನೆಗೆ ಕರೆದುಕೊಂಡು ಬರಲು ಹೋಗಿದ್ದಾರೆ. ಆದರೆ ಈ ವೇಳೆ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಕೆಂಪಮ್ಮನ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆಗೈದು, ನಂತರ ಕಿವಿಯೋಲೆ, ಮೂಗುತಿ, ತಾಳಿಯನ್ನು ಕಿತ್ತುಕೊಂಡಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ದೊಡ್ಡದಾದ ಚೀಲದಲ್ಲಿ ತುಂಬಿ ಪಕ್ಕದಲ್ಲೇ ಇದ್ದ ಆರ್ಕಾವತಿ ನದಿಗೆ ಎಸೆದು ಪರಾರಿಯಾಗಿದ್ದಾರೆ.

ಬಹಳ ಸಮಯ ಕಳೆದರು ಕೆಂಪಮ್ಮ ಮನೆಗೆ ಬಾರದೇ ಇದ್ದುದರಿಂದ ಅನುಮಾನಗೊಂಡ ಕುಟುಂಬಸ್ಥರು ಕೆಂಪಮ್ಮಳನ್ನು ಹುಡುಕಿದ್ದಾರೆ. ಈ ವೇಳೆ ಹಸುಗಳು ಮಾತ್ರ ಕಂಡಿದ್ದು, ಕೆಂಪಮ್ಮರ ಸುಳಿವು ಮಾತ್ರ ಸಿಕ್ಕಿರಲಿಲ್ಲ.ಮತ್ತೆ ಶೋಧ ನಡೆಸಿದ ಅವರಿಗೆ ಆರ್ಕಾವತಿ ನದಿಯಲ್ಲಿ ದೊಡ್ಡದಾದ ಚೀಲ ಕಂಡಿದೆ. ಅನುಮಾನಗೊಂಡು ಅದನ್ನ ತೆರೆದು ನೋಡಿದಾಗ ಕೆಂಪಮ್ಮನ ಶವ ಪತ್ತೆಯಾಗಿದೆ.

ಕೂಡಲೇ ಈ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.

ಹಿಂದಿನ ಲೇಖನಮೈಸೂರಿನ ಶಕ್ತಿಧಾಮಕ್ಕೆ ತಮಿಳು ನಟ ವಿಶಾಲ್ ಭೇಟಿ
ಮುಂದಿನ ಲೇಖನಬಿಜೆಪಿಯ ಜನ ಸ್ಪಂದನ ಸಮಾವೇಶ: ಅಪಾರ ಸಂಖ್ಯೆಯಲ್ಲಿ ಜನರ ಆಗಮನ