ಮನೆ ರಾಜಕೀಯ ಮುಖ್ಯಮಂತ್ರಿಗಳಿಂದ ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ

ಮುಖ್ಯಮಂತ್ರಿಗಳಿಂದ ರೈತರ ಖಾತೆಗೆ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ಸಹಾಯಧನ ವರ್ಗಾವಣೆ

0

ಬೆಂಗಳೂರು(Bengaluru): ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದ 47.83 ಲಕ್ಷ ರೈತರಿಗೆ 956.71 ಕೋಟಿ ರೂ.ಗಳ ಆರ್ಥಿಕ ಸಹಾಯಧನ ವರ್ಗಾಯಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅವರಿಂದು ರೈತರ ಖಾತೆಗಳಿಗೆ ಸಹಾಯಧನ ವರ್ಗಾಯಿಸಿದ್ದು, 2018-19  ರಿಂದ 2021-22 ರವರೆಗೆ ಭಾರತ ಸರ್ಕರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ ಒಟ್ಟು 3864.66 ಕೋಟಿ ರೂ. ರಾಜ್ಯದ ರೈತರಿಗೆ ಪಾವತಿಯಾದಂತಾಗಿರುತ್ತದೆ.2021-22 ನೇ ಸಾಲಿನಲ್ಲಿ 50.35 ಲಕ್ಷ ರೈತರಿಗೆ 1975.12 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ.

ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯವು ಅತಿಹೆಚ್ಚು ಅಂದರೆ 96% ರಷ್ಟು ಆಧಾರ್ ಆಧಾರಿತ ಪಾವತಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ರಾಜ್ಯವಾಗಿದ್ದು, ಕಳೆದ ಬಾರಿ 2020-21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯದ ಕೃಷಿಇಲಾಖೆಗೆ ಪ್ರಶಸ್ತಿಯು ಲಭಿಸಿದೆ.

2019 ರಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಅರ್ಹ ರೈತರಿಗೆ ಹೆಚ್ಚುವರಿಯಾಗಿ 4 ಸಾವಿರ ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ  ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯೋಜನೆಯಡಿ  ನೀಡುತ್ತಿದೆ. ಆಧಾರ್ ಗುರುತಿನ ಸಂಖ್ಯೆಯಾಧಾರದ ಮೇಲೆ ನೇರ ನಗದು ವರ್ಗಾವಣೆ ಪ್ರಕ್ರಿಯೆ ಮೂಲಕ ರೈತರ ಖಾತೆಗೆ  ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ್, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಿವಯೋಗಿ ಕಳಸದ, ಕೃಷಿ ಇಲಾಖೆ ಆಯುಕ್ತ ಶರತ್, ನಿರ್ದೇಶಕಿ ನಂದಿನಿಕುಮಾರಿ ,  ಜಲಾನಯನ ಇಲಾಖೆ ಆಯುಕ್ತ ಡಾ. ವೆಂಕಟೇಶ್, ನಿರ್ದೇಶಕ ಶ್ರೀನಿವಾಸ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.