ಮೈಸೂರು, ಡಿಸೆಂಬರ್ 3: ಫೆಂಗಲ್ ಚಂಡಮಾರುತದ ಪರಿಣಾಮ ಮೈಸೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯ ಪರಿಣಾಮವಾಗಿ ಚಾಮುಂಡಿ ಬೆಟ್ಟದಲ್ಲಿ ಕಲ್ಲು ಬಂಡೆಗಳು ರಸ್ತೆಗೆ ಜಾರಿಬಿದ್ದಿವೆ.
ರಸ್ತೆಗುರುಳಿದ ಬಂಡೆಗಳಿಂದ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಗಿದೆ. ಅದೃಷ್ಟವಶಾತ್, ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಂತರ ಮಳೆಯಿಂದ ಮೈಸೂರಿನಲ್ಲಿ ಅಪಾರ ಪ್ರಮಾಣದ ಬೆಳೆ ನಾಶವೂ ಆಗಿದೆ. ಕಾಳೇನ ಹಳ್ಳಿ ಗ್ರಾಮದಲ್ಲಿ ಕಟಾವು ಮಾಡಿದ್ದ ಭತ್ತ ನೀರು ಪಾಲಾಗಿದೆ. ಭತ್ತದ ಗದ್ದೆಗಳು ಕೆರೆಯಂತಾಗಿವೆ. ಭತ್ತದ ಗದ್ದೆಯಿಂದ ನೀರು ಹೊರ ಹಾಕಲು ರೈತ ಮಹಿಳೆಯರು ಹರಸಾಹಸಪಟ್ಟರು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪರಿಣಾಮವಾಗಿ ಅನ್ನದಾತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.














