ಬೆಂಗಳೂರು: ಪೊಲೀಸ್ ಇಲಾಖೆಗೆ ನಕಲಿ ದಾಖಲೆಗಳು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಠಾಣೆ ಸಬ್ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡರನ್ನು ಅಮಾನತು ಮಾಡಿ, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ.
ನಕಲಿ ದಾಖಲೆ ನೀಡಿದ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಸಬ್ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ಜಾಮೀನು ಪಡೆದುಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್ಐ ಅಮಾನತು ಮಾಡಲಾಗಿದೆ.
ನಕಲಿ ಜನ್ಮ ದಿನಾಂಕ ಹೊಂದಿರುವ ದಾಖಲೆಯನ್ನು ನೀಡಿ ಕೆಲಸ ಪಡೆದುಕೊಂಡ ಆರೋಪದಡಿ ಸಬ್ಇನ್ಸ್ಪೆಕ್ಟರ್ ಕಾಶಿಲಿಂಗೇಗೌಡ ವಿರುದ್ಧ ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ ನೀಡಿರುವ ದೂರಿನ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು ಸರ್ಕಾರದ ನಿಯಮ ಇದೆ. ಹೀಗಿರುವಾಗ ಅರ್ಹ ಅಭ್ಯರ್ಥಿ ಅಲ್ಲದಿದ್ದರು ಕೂಡ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 1988 ಏಪ್ರಿಲ್ 15 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ನೇಮಕವಾಗಿದ್ದಾರೆ ಎಂದು ದೂರು ನೀಡಲಾಗಿತ್ತು.














