ಮನೆ ಅಪರಾಧ ಶಿವಮೊಗ್ಗ: ಆಸ್ತಿ ಕೊಡದ ಅಪ್ಪನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು

ಶಿವಮೊಗ್ಗ: ಆಸ್ತಿ ಕೊಡದ ಅಪ್ಪನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು

0

ಶಿವಮೊಗ್ಗ(Shivamogga): ಆಸ್ತಿಕೊಡದ ಅಪ್ಪನನ್ನು ಮಕ್ಕಳೇ ಸುಪಾರಿ ನೀಡಿ ಕೊಲೆ ಮಾಡಿಸಿದ ಆಘಾತಕಾರಿ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿದೆ.

ಕೆಎಸ್ಆರ್’ಪಿಯ ನಿವೃತ್ತ ಎಆರ್ ಎಸ್’ಐ ನಾಗೇಂದ್ರಪ್ಪ ಅವರು ಕೊಲೆಯಾದ ವ್ಯಕ್ತಿ.

ಏನಿದು ಘಟನೆ?

ಕಳೆದ ನವೆಂಬರ್ 29 ರಂದು ಶಿರಾಳಕೊಪ್ಪದಲ್ಲಿ ಚರಂಡಿಯಲ್ಲಿ ಕೆಎಸ್ಆರ್’ಪಿಯ ನಿವೃತ್ತ ಎಆರ್ ಎಸ್’ಐ, ಶಿವಮೊಗ್ಗದ ಶಿರಾಳಕೊಪ್ಪದ ಭೋಗಿ ಗ್ರಾಮದ ನಾಗೇಂದ್ರಪ್ಪ ಅವರ ಶವ ಪತ್ತೆಯಾಗಿತ್ತು.

ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇದರ ಹಿಂದಿನ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ನಾಗೇಂದ್ರಪ್ಪ ಅವರು ವಾಸದ ಮನೆಯನ್ನು 2ನೇ ಹೆಂಡತಿ ಹೆಸರಿಗೆ ಮಾಡಿದ್ದರು. ಬಳಿಕ ಜಮೀನನ್ನು ಕೂಡಾ 2ನೇ ಹೆಂಡತಿ- ಮಗುವಿಗೆ ವರ್ಗಾವಣೆ ಮಾಡುತ್ತಾರೆ ಎಂದು ಮೊದಲ ಹೆಂಡತಿ ಮಕ್ಕಳಾದ ಮಂಜುನಾಥ್, ಉಮೇಶ್ ಅವರು ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದಾರೆ. ಭೋಗಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬುವರಿಗೆ ಸುಪಾರಿ ನೀಡಿದ ಮಂಜುನಾಥ್ ಮತ್ತು ಉಮೇಶ್ ಕೃತ್ಯವೆಸಗಿದ್ದಾರೆ.

ನಾಗೇಂದ್ರಪ್ಪ ಅವರು ಭದ್ರಾವತಿ ಕೋರ್ಟ್’ಗೆ ಹೋಗಿ, ವಾಪಾಸ್ ಶಿಕಾರಿಪುರಕ್ಕೆ ಬರುತ್ತಿದ್ದ ವೇಳೆ ಆರೋಪಿಗಳು ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದರು. ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು, ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದಾರೆ. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಅದೇ ಆಟೋದಲ್ಲಿ ಶವ ಸಾಗಾಟ ಮಾಡಿದ್ದಾರೆ.

ಬಳಿಕ ಆರೋಪಿಗಳು ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯ ಪಕ್ಕದಲ್ಲಿನ ಚರಂಡಿಗೆ ಶವ ಎಸೆದಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಮಂಜುನಾಥ್, ಉಮೇಶ್, ರಿಜ್ವಾನ್, ಹಬೀಬ್ ಉಲ್ಲಾ ಹಾಗೂ ಸುಹೇಲ್ ಬಾಷಾ ಬಂಧಿತ ಆರೋಪಿಗಳಾಗಿದ್ದಾರೆ.

ಹಿಂದಿನ ಲೇಖನಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್‌ ದೇಶ್‌’ಮುಖ್‌’ಗೆ ಜಾಮೀನು ನೀಡಿ, ತಕ್ಷಣ ತಡೆ ಹಿಡಿದ ಬಾಂಬೆ ಹೈಕೋರ್ಟ್‌
ಮುಂದಿನ ಲೇಖನಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ: ಸಚಿವ ಆರ್ ಅಶೋಕ್