ಮನೆ ಆರೋಗ್ಯ ಹೊಟೇಲ್, ಉಪಾಹಾರ, ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ದಿನೇಶ್ ಗುಂಡೂರಾವ್

ಹೊಟೇಲ್, ಉಪಾಹಾರ, ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ: ದಿನೇಶ್ ಗುಂಡೂರಾವ್

0

ಬೆಂಗಳೂರು: ಹಲವು ಹೊಟೇಲ್ ಗಳು, ಉಪಾಹಾರ ಕೇಂದ್ರಗಳು, ಬೀದಿಬದಿ ತಿನಿಸು ಕೇಂದ್ರಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಕವರ್ ಗಳನ್ನು ಬಳಸಲಾಗುತ್ತಿದ್ದು, ಅದರಿಂದಾಗಿ ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿರುವುದು ಮಾದರಿ ಪರೀಕ್ಷೆಗಳಿಂದ ದೃಢಪಟ್ಟಿದೆ.

Join Our Whatsapp Group

ವಿವಿಧ ತಿನಿಸು ಕೇಂದ್ರಗಳಿಂದ ಸಂಗ್ರಹಿಸಲಾದ ಇಡ್ಲಿ ಮಾದರಿಗಳಲ್ಲಿ ಸುಮಾರು ಶೇಕಡಾ 50ರಷ್ಟು ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ ರಾಜ್ಯದ ಹೋಟೆಲ್​, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಹೋಟೆಲ್​, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಇನ್ನು ಮುಂದೆ ಬಳಸುವಂತಿಲ್ಲ. ಆಹಾರ ತಯಾರಿಕೆ, ವಿತರಣೆ ವೇಳೆ ಕೂಡ ಪ್ಲಾಸ್ಟಿಕ್ ಬಳಸಬಾರದು. ಆಹಾರದ ಬಿಸಿಗೆ ಪ್ಲಾಸ್ಟಿಕ್ ನಿಂದ ಹೊರಸೂಸುವ ಪದಾರ್ಥಗಳು ವಿಷಕಾರಿಯಾಗುತ್ತಿದ್ದು ಕ್ಯಾನ್ಸರ್ ಕಾರಕ ಅಂಶಗಳನ್ನು ಸಹ ಹೊರಸೂಸುತ್ತದೆ ಎಂದು ವರದಿಯಿಂದ ದೃಢಪಟ್ಟಿದೆ, ಈ ಹಿನ್ನೆಲೆಯಲ್ಲಿ ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆಯನ್ನೇ ಬಳಸಬೇಕು ಎಂದು ಕಡ್ಡಾಯವಾಗಿ ನಿಯಮ ಹೊರಡಿಸಲಾಗುವುದು ಎಂದು ತಿಳಿಸಿದರು.

ಹೊಟೇಲ್, ಉಪಹಾರ ಕೇಂದ್ರಗಳು ಸೇರಿದಂತೆ ಸುಮಾರು 251 ತಿಂಡಿ ಹೋಟೆಲ್, ಅಂಗಡಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿತ್ತು. ಅವುಗಳ ಪೈಕಿ 51 ಕಡೆ ಸಂಗ್ರಹಿಸಿದ್ದ ಸ್ಯಾಂಪಲ್ಸ್ ಅಸುರಕ್ಷಿತ ಎಂಬುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪ್ಲಾಸ್ಟಿಕ್ ನಲ್ಲಿ ಬಿಸಿ ಮಾಡಿದ ಆಹಾರಗಳಲ್ಲಿ ಕಾರ್ಸಿನೋಜೆನಿಕ್ ಅಂಶ ಪತ್ತೆಯಾಗಿದೆ. ಪ್ಲಾಸ್ಟಿಕ್​ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಸೇರಿದೆ ಎಂದು ಹೇಳಿದರು.

ಕಾರ್ಸಿನೋಜೆನಿಕ್​​ ನಿಂದ ಕ್ಯಾನ್ಸರ್

ಹೋಟೆಲ್​ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಕಡೆ ಹೋಟೆಲ್​ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಇಡ್ಲಿಯಲ್ಲಿ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ಕಾರ್ಸಿನೋಜೆನಿಕ್ ಅಂಶ ಕ್ಯಾನ್ಸರ್​​ಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.