ಮನೆ ಸುದ್ದಿ ಜಾಲ ಮಧು ಮಾದೇಗೌಡರನ್ನು ಪಕ್ಷಾತೀತವಾಗಿ ಗೆಲ್ಲಿಸಲು ಶಾಸಕ ದಿನೇಶ್ ಗೂಳಿಗೌಡ ಮನವಿ

ಮಧು ಮಾದೇಗೌಡರನ್ನು ಪಕ್ಷಾತೀತವಾಗಿ ಗೆಲ್ಲಿಸಲು ಶಾಸಕ ದಿನೇಶ್ ಗೂಳಿಗೌಡ ಮನವಿ

0

ಮೈಸೂರು (Mysuru)-ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರನ್ನು ಪಕ್ಷಾತೀತವಾಗಿ ಗೆಲ್ಲಿಸುವಂತೆ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದಾರೆ.

ಇಂದು ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಜಿ. ಮಾದೇಗೌಡ ಅವರ ಹಿನ್ನೆಲೆಯನ್ನು ಗಮನಿಸುವುದಾದರೆ ಎಲ್ಲರಿಗಿಂತ ತುಸು ಎತ್ತರದಲ್ಲಿಯೇ ಇದ್ದಾರೆ. ಇವರು ಹೋರಾಟದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಸ್ವತಃ ಶಿಕ್ಷಣವಂತರು, ಕಳೆದ 25 ವರ್ಷಗಳಿಂದ ಭಾರತಿ ವಿದ್ಯಾಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಗೆ ಬಹುಕಾಲ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಭಾರತಿ ವಿದ್ಯಾಸಂಸ್ಥೆ ಮೂಲಕ  ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಿದ್ದಲ್ಲದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ ಎಂದು ತಿಳಿಸಿದರು.

ಇನ್ನು ಇವರ ತಂದೆಯವರಾದ ಜಿ. ಮಾದೇಗೌಡ ರವರು ಜನತೆಗಾಗಿಯೇ ಸೇವೆ ಸಲ್ಲಿಸಿದವರು. ಕನ್ನಡ ನಾಡು, ನುಡಿ, ಜಲಕ್ಕೆ ಸಂಬಂಧಪಟ್ಟಂತೆ ಹೋರಾಟವನ್ನು ಮಾಡಿಕೊಂಡೇ ಬಂದವರು. ಪಂಚಾಯಿತಿಯಿಂದ ದೆಹಲಿವರೆಗೂ ಇವರ ಹೋರಾಟವನ್ನು ನಾಡಿನ ಸಮಸ್ತ ಜನತೆ ನೋಡಿದ್ದಾರೆ. ಇವರನ್ನು ಚಿಕ್ಕಿಂದಿನಿಂದಲೂ ನೋಡಿಕೊಂಡೇ ಬೆಳೆದ, ಅವರ ಆದರ್ಶ, ಸಿದ್ಧಾಂತವನ್ನು ಹತ್ತಿರದಿಂದ ಕಂಡಂತ ಮಧು ಮಾದೇಗೌಡ ರವರು ಹಾಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ಈಗ ಮಧು ಅವರನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಹಾಗೂ ಕಾವೇರಿ ಹೋರಾಟಗಾರರಾದ ಜಿ ಮಾದೇಗೌಡರ ಋಣವನ್ನು ತೀರಿಸುವ ಅವಕಾಶ ಪದವೀಧರರಿಗೆ ಲಭ್ಯವಾಗಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಅವುಗಳಿಗೆ ಪರಿಹಾರ ದೊರೆಯಬೇಕು. ಸಮಸ್ಯೆಗಳಿಗೆ ಕಿವಿಯಾಗಬೇಕೆಂದರೆ ಅದಕ್ಕೆ ಏಕೈಕ ಪರಿಹಾರವಾಗಿ ನಮಗೆ ಮಧು ಮಾದೇಗೌಡ ಅವರು ಕಾಣುತ್ತಾರೆ. ಇಂತಹ ಒಬ್ಬ ಸರಳ, ಸಜ್ಜನ ವ್ಯಕ್ತಿತ್ವವುಳ್ಳವರ ಅವಶ್ಯಕತೆ ನಾಡಿಗೆ ಇದೆ. ಮಧು ಮಾದೇಗೌಡ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು. ಅವರ ಗೆಲುವಿಗೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ನಾನು ಈ ಮೂಲಕ ಮಾನ್ಯ ಮತದಾರರನ್ನು ಕೋರುತ್ತೇನೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.