ಬೆಂಗಳೂರು : ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದ್ದೇವೆ. ಈ ಸಮಿತಿ ರಚನೆಯಾಗಿ ಒಂದೂವರೆ ವರ್ಷವಾಗಿದ್ದು, ಈ ಸಮಿತಿ ಬಗ್ಗೆ ಬಿಜೆಪಿಗರಿಗೆ ಈಗ ಅರಿವಾಗಿದೆಯೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ವಿಧಾನಸೌಧದ ಆವರಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವಿಚಾರವಾಗಿ ಬಿಜೆಪಿಯವರ ಪ್ರತಿಭಟನೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅವರ ಹಕ್ಕು ಕಸಿದಿಲ್ಲ. ಶಾಸಕರ ಹಕ್ಕು ಹಾಗೇ ಇದೆ. ನಾವು ಬಡವರಿಗಾಗಿ ಹೊಸದಾಗಿ ಐದು ಗ್ಯಾಂರಟಿ ಯೋಜನೆಗಳನ್ನು ನೀಡಿದ್ದು, ಈ ಯೋಜನಗಳು ಸರಿಯಾಗಿ ತಲುಪುತ್ತಿದೇಯೇ ಇಲ್ಲವೇ? ಇದರ ಸದುಪಯೋಗವಾಗುತ್ತಿದೆಯೇ ಅಥವಾ ದುರುಪಯೋಗವಾಗುತ್ತಿದೆಯೇ ಎಂದು ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಲು ನಮ್ಮ ಜನರಿಗೆ ಜವಾಬ್ದಾರಿ ನೀಡಿದ್ದೇವೆ.
ಜನರಿಗೆ ಯೋಜನೆ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾವು ಇದನ್ನು ಮಾಡಿದ್ದೇವೆ. ಮಾನ್ಯ ಪ್ರಧಾನಮಂತ್ರಿಗಳು ಸೇರಿದಂತೆ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದ್ದರು. ಈಗ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಅವರ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದಾರೆ. ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದರು. ಗ್ಯಾರಂಟಿ ಯೋಜನೆಗಳು ಆರಂಭವಾಗಿರುವುದು ಕರ್ನಾಟಕದಿಂದ, ನಾವೇ ಇದಕ್ಕೆ ಮಾದರಿ ಎಂದರು.
ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ನೇಮಕಕ್ಕೆ ಮುಂದಾಗಿಲ್ಲವೇ? : ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಕಾರ್ಯಕರ್ತರನ್ನು ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ನೇಮಿಸಲು ಮುಂದಾಗಿಲ್ಲವೇ? ಆರೆಸ್ಸೆಸ್ ರಾಜಕೀಯ ಪಕ್ಷವಲ್ಲದಿದ್ದರೂ ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸಾಧಿಸಲು ನೇಮಿಸಿರುವುದೇಕೆ? ಈ ಹಿಂದೆ ಕೆಆರ್ಡಿಬಿಎ ಗೆ ೩೦೦ ಕೋಟಿ ರೂ. ಕೊಟ್ಟು ಪರ್ಯಾಯಾವಾಗಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ನಾವು ಅವರಂತೆ ಮಾಡಿಲ್ಲ. ನಾವು ಗ್ಯಾರಂಟಿ ಸಮಿತಿ ಸದಸ್ಯರಿಗೆ ಗೌರವಧನ ನೀಡುತ್ತಿದ್ದೇವೆ. ಜನ ನಮಗೆ ೧೩೮+೨ ಒಟ್ಟು ೧೪೦ ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಅವರು ಕೊಟ್ಟ ಶಕ್ತಿ ಮೇಲೆ ನಮ್ಮ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಿದ್ದೇವೆ. ಆ ಮೂಲಕ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಎಲ್ಲಾ ಪಕ್ಷದವರನ್ನು ಒಳಗೊಂಡಂತೆ ನ್ಯಾಯಯುತವಾಗಿ ಯೋಜನೆ ತಲುಪುವಂತೆ ಮಾಡಲು ಜವಾಬ್ದಾರಿ ನೀಡಿದ್ದೇವೆ ಎಂದು ಹೇಳಿದರು.
ಜೊತೆಯಲ್ಲಿ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಅಪರಾಧದಲ್ಲೂ ಭಾಗಿ ಎನ್ನಲು ಸಾಧ್ಯವೇ? : ರನ್ಯಾ ರಾವ್ ಪ್ರಕರಣದಲ್ಲಿ ಸಚಿವರ ಕೈವಾಡದ ಬಗ್ಗೆ ಕೇಳಿದಾಗ, “ಇದೆಲ್ಲಾ ಕೇವಲ ಊಹಾಪೋಹಗಳು. ಇದು ಬಿಜೆಪಿಯ ಗೇಮ್ ಪ್ಲಾನ್. ಯಾವ ಸಚಿವರ ಹೆಸರಿದೆ? ಯಾರಾದರೂ ನೋಡಿದ್ದಾರಾ? ಕೇಳಿದ್ದಾರಾ? ನಾವು ಮದುವೆ ಸೇರಿದಂತೆ ಶುಭ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇವೆ. ಅಲ್ಲಿ ಅನೇಕರು ನಮ್ಮ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ.
ಯಾರೋ ನನ್ನ ಪಕ್ಕ ಬಂದು ನಿಂತುಕೊಂಡ ತಕ್ಷಣ ನನಗೂ ಅವರಿಗೂ ಸಂಬಂಧ ಇದೆ ಎಂದು ಭಾವಿಸಲು ಸಾಧ್ಯವೇ? ನಮ್ಮ ಜತೆ ಫೋಟೋ ತೆಗೆಸಿಕೊಂಡವರು ಅಪರಾಧ ಮಾಡಿದರೆ ನಾವು ಅದಕ್ಕೆ ಬೆಂಬಲ ನೀಡಿದ್ದೇವೆ ಎಂದು ಹೇಳಲು ಸಾಧ್ಯವೇ? ಇಂತಹ ಸಚಿವರು ಈ ರೀತಿಯಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಇದ್ದರೆ ನೀವು ಚರ್ಚೆ ಮಾಡಿ. ಯಾವುದೇ ಮಂತ್ರಿ ಅಪರಾಧ ಮಾಡಲು ಬೆಂಬಲ ನೀಡುವುದಿಲ್ಲ. ಈ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಮುಖ್ಯಮಂತ್ರಿಗಳು ಕೂಡ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ. ನಾನು ಇತ್ತೀಚೆಗೆ ದುಬೈಗೆ ತೆರಳಿದ್ದೆ. ಆಗ ನನ್ನ ಉಂಗುರ, ಬೆಲ್ಟ್, ವಾಚ್ಗಳನ್ನು ತೆಗೆಸಿದ್ದರು. ಇಂತಹ ಭದ್ರತೆ ಮಧ್ಯೆ ೧೪ ಕೆ.ಜಿ ಚಿನ್ನ ಕಳ್ಳಸಾಗಾಣೆ ಹೇಗೆ ಸಾಧ್ಯ ಎಂದು ನನಗೂ ಅಚ್ಚರಿಯಾಗಿದೆ” ಎಂದು ತಿಳಿಸಿದರು.














