ಮಂಡ್ಯ(Mandya): ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಅಮಾನವೀಯವಾಗಿ ನಡೆದುಕೊಂಡಿದ್ದು, ಮದುವೆಯಾಗಿ ಗಂಡನ ಮನೆಯಲ್ಲಿದ್ದ ನವ ವಧುವನ್ನು ರಾತ್ರಿ ಒಬ್ಬರು ಮಹಿಳಾ ಪೊಲೀಸರಿಲ್ಲದೇ ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವ ಪೊಲೀಸರ ನಡೆಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.
ಮಂಡ್ಯ ತಾಲೂಕಿನ ಚೀರನಹಳ್ಳಿ ಗಂಗಾ ಮತಸ್ಥರ ಬಲ್ಲೇಶ ಮತ್ತು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ನಿವಾಸಿಯಾದ ಗಂಗಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದು. ಕಳೆದ ವರ್ಷ ಜೂನ್ 8 ನೇ ತಾರೀಖಿನಂದು ಕಾನೂನು ಪ್ರಕಾರ ರಿಜಿಸ್ಟರ್ ಮದುವೆಯಾಗಿದ್ದರು. ನಂತರ ಇಬ್ಬರೂ ಚೀರನಹಳ್ಳಿ ಬಲ್ಲೇಶ ನ ಮನೆಯಲ್ಲಿ ವಾಸವಿದ್ದರು.
ಈ ಕುರಿತು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ನವವಧು ಭಾಗ್ಯ ಪೋಷಕರು ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಪೊಲೀಸರು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರ ಜೊತೆಗೂಡಿ ಚೀರನಹಳ್ಳಿ ಬಲ್ಲೇಶನ ಮನೆಗೆ ನುಗ್ಗಿ ಬಲವಂತವಾಗಿ ನವ ವಧುವನ್ನು ಮಂಡ್ಯ ಗ್ರಾಮಾಂತರ ಠಾಣೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ, ಪತ್ರಕರ್ತ ಲಕ್ಷ್ಮಣ್ ಚೀರನಹಳ್ಳಿ, ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಮಂಜುನಾಥ್ ಅವರ ಜೊತೆಗೂಡಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳಾ ಪೊಲೀಸ್ ಪೇದೆ ಇಲ್ಲದೆ ಹೆಣ್ಣುಮಗಳನ್ನು ತಡರಾತ್ರಿ ಠಾಣೆಗೆ ಕರೆತಂದಿರುವುದು ಸರಿಯಲ್ಲ. ಇದು ಕಾನೂನು ಉಲ್ಲಂಘನೆ ಎಂದು ಲಕ್ಷ್ಮಣ್ ಪೊಲೀಸರನ್ನು ಪ್ರಶ್ನಿಸಿದ್ದಾರೆ.