ಮೈಸೂರು: ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲಿಯೂ ಜಾತಿ ಗಣತಿ ಸಮೀಕ್ಷೆಯನ್ನು ಮಾಡಬೇಕು. ಪ್ರತಿಯೊಬ್ಬರನ್ನು ಒಳಗೊಂಡತೆ ಸಮೀಕ್ಷೆ ಇರಬೇಕು ಎಂದು ಮೈಸೂರಿನ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಪಿ. ಎಲ್.ಶಿವಕುಮಾರ್ ಅವರು ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಪರಿಶಿಷ್ಠ ಜಾತಿಗಳ ಸಮಗ್ರ ಸಮೀಕ್ಷೆ ಸಮಿತಿ ತರಬೇತಿಯಲ್ಲಿ ಜಾತಿ ಗಣತಿ ಸಮೀಕ್ಷೆ ಕುರಿತು ಮಾತನಾಡಿದರು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಮೂರು ಜಾತಿಗಳು ಇದ್ದು ಅದರಲ್ಲಿ 101 ಉಪ ಜಾತಿಗಳು ಬರುತ್ತವೆ. ಅದರಲ್ಲಿ ಆದಿ ಕರ್ನಾಟಕ ಅಂತ ಬಂದಾಗ ಅವರಲ್ಲಿ 98 ಉಪ ಜಾತಿ ಇರುವುದರಿಂದ 98 ಉಪ ಜಾತಿಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರುತ್ತಾರೆ. ಅದನ್ನು ತಿಳಿದುಕೊಂಡು ಜಾತಿಗಣತಿ ಮಾಡಬೇಕು. 98 ಉಪ ಜಾತಿಯಲ್ಲಿ ಯಾವುದು ಎಂದು ಗೊತ್ತಿಲ್ಲದಾಗ ತಿಳಿದಿಲ್ಲ ಎಂದು ನೋಂದಣಿ ಮಾಡಬೇಕು ಎಂದು ಹೇಳಿದರು.
ಗಣತಿದಾರರು ನಿಖರವಾಗಿ ಮನೆ ಮನೆಗೆ ಹೋಗಿ ಸೌಹಾರ್ದಯುತವಾಗಿ, ನಗು ಮುಖದಿಂದ ನಡೆದುಕೊಳ್ಳಬೇಕು. ಸಮೀಕ್ಷೆ ಮಾಡುವಾಗ ಕುಟುಂಬದಲ್ಲಿ ಇರುವಂತವರಿoದಲೇ ಮಾಹಿತಿಯನ್ನು ತೆಗೆದುಕೊಳ್ಳಬೇಕು. ಕೆಲವರು ಕುಳಿತಲಿಯೇ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಇದನ್ನ ಮಾಡಬಾರದು. ಆ ಕುಟುಂಬದವರಿoದಲೇ ಮಾಹಿತಿಯನ್ನು ತೆಗೆದುಕೊಂಡು ಯಾರು ಮಾಹಿತಿ ನೀಡಿರುತ್ತಾರೆ ಅವರ ಭಾವಚಿತ್ರವನ್ನು ತೆಗೆದುಕೊಳ್ಳಬೇಕು ಇದರಿಂದ ಯಾರು ಮಾಹಿತಿ ಕೊಟ್ಟಿದ್ದಾರೆ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.
ಗಣತಿಗಾಗಿಯೇ ಆಪ್ ಅನ್ನು ಕ್ರಿಯೇಟ್ ಮಾಡಲಾಗಿದ್ದು, ಆಂಡ್ರಾಯ್ಡ್ ಫೋನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅದರಂತೆ ಗಣತಿ ಮಾಡಬೇಕಾಗುತ್ತದೆ. ಗಣತಿ ದಾರರಿಗೆ ಮಾತ್ರ ಆಪ್ ಅನ್ನು ಕಳಿಸಲಾಗುತ್ತದೆ. ಗಣತಿದಾರರಿಗೆ ಬೆಳಗ್ಗೆ 6.30 ರಿಂದ ಸಂಜೆ 6.30 ರ ವರೆಗೆ ಸಮಯ ನಿಗಧಿ ಪಡಿಸಲಾಗಿರುತ್ತದೆ. ಲಾಗಿನ್ ಆಗಿದ ನಂತರ ಸಮಯ ಮುಗಿದ ಮೇಲೆ ಅದೇ ಲಾಗ್ಔಟ್ ಆಗುತ್ತದೆ ಅಲ್ಲಿಯ ವರೆಗೆ ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.
ಒಬ್ಬ ಗಣತಿದಾರರು 200 ರಿಂದ 300 ಕುಟುಂಬವನ್ನಾದರು ಜವಾಬ್ದಾರಿಯುತವಾಗಿ, ತಾಳ್ಮೆಯಿಂದ ಜಾತಿಗಣತಿ ಮಾಡಬೇಕು. ಗಣತಿದಾರರಿಗೆ ತಾಳ್ಮೆ ಬಹಳ ಮುಖ. ಗಣತಿದಾರಿಗೂ ಸಹ ಮೇಲ್ವಿಚಾರಕರು ನೇಮಕ ಮಾಡಲಾಗಿದ್ದು, ಗಣತಿದಾರರು ಸರಿಯಾಗಿ ಸಮೀಕ್ಷೆ ಮಾಡುತ್ತಿದ್ದಾರಾ ಎಂದು ಮೇಲ್ವಿಚಾರಕರು ಶೇ. 10% ರಷ್ಟು ಸಮೀಕ್ಷೆ ಮಡಬೇಕು ಎಂದು ಹೇಳಿದರು.

ಜಾತಿ ಗಣತಿಯು ರೇಷನ್ ಕಾರ್ಡ್ನ ನಂಬರ್ ಮೂಲಕ ಮಾಡಲಾಗುತ್ತದೆ. ರೇಷನ್ ಕಾರ್ಡ್ ಹೊಂದಿಲ್ಲದೆ ಇರುವವರಿಗೆ ಆಧಾರ್ ಕಾರ್ಡ್ನ ಮೂಲಕ ಅವರ ಮಾಹಿತಿಯನ್ನು ತೆಗೆದುಕೊಳ್ಳಬೇಕು. ಒಂದು ಮನೆಯಲ್ಲಿ ಒಂದು ಬಾರಿ ಮಾತ್ರ ಜಾತಿಗಣತಿ ಮಾಡಬೇಕು. ಕುಟುಂಬದವರಿoದಲೇ ಮಾಹಿತಿಯನ್ನು ಪಡೆದುಕೊಂಡು ಪ್ರತಿಯೊಂದು ಮನೆಗಳಿಗೂ ಹೋಗಿ ಸಮೀಕ್ಷೆ ಮಾಡಬೇಕು. ಬೇರೆ ಅವರು ಪರಿಶಿಷ್ಟ ಜಾತಿ ಎಂದು ಸುಳ್ಳು ಹೇಳಿ ಮಾಹಿತಿಯನ್ನು ನೀಡುವುದರಿಂದ ಸಮೀಕ್ಷೆಯಲ್ಲಿ ಅವರು ಎಸ್.ಸಿ ಎಂದು ತಿಳಿದು ಬಂದರೆ ಮಾತ್ರ ಸಮೀಕ್ಷೆ ಮುಂದುವರಿಸಬೇಕು ಎಂದರು.
ಜಾತಿಯಲ್ಲಿ ತುಂಬಾ ಸೂಕ್ಷ್ಮತೆ ಇರುವುದರಿಂದ ಜಾತಿಗಣತಿ ಸಮೀಕ್ಷೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಜಾತಿ ಗಣತಿದಾರರು ಜನರಲ್ಲಿ ಮನವರಿಗೆ ಮಾಡಬೇಕು, ಇದರಿಂದ ಆಗುವ ಅನುಕೂಲದ ಬಗ್ಗೆ ತಿಳಿಸಿ ಮನವೊಲಿಸಿ ಅವರಿಗೆ ಯಾವುದೇ ರೀತಿ ಬೇಜಾರಾಗದ ರೀತಿಯಲ್ಲಿ ನಡೆದುಕೊಂಡು ಈ ಸಮೀಕ್ಷೆಯನ್ನು ಯಶಸ್ವಿ ಗೊಳಿಸಬೇಕು, ಜಾತಿಗಣತಿ ಕೆಲಸ ಹೆಮ್ಮೆಯ ಕೆಲಸ, ರಾಷ್ಟ್ರ ಸೇವೆಯ ಕೆಲಸ ಎಂದು ಭಾವಿಸಿಕೊಂಡು ಪ್ರತಿಯೊಬ್ಬ ಜಾತಿ ಗಣತಿದಾರರು ಸಮೀಕ್ಷೆ ಮಾಡಬೇಕು ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ರಂಗೇಗೌಡ, ಮಹಾನಗರ ಪಾಲಿಕೆಯ ಆಯುಕ್ತರಾದ ಸೋಮಶೇಖರ್, ಉಪ ಆಯುಕ್ತರಾದ ದಾಸೇಗೌಡ, ಡಿ. ಡಿ. ಪಿ. ಐ. ನ ಜವರೇಗೌಡ, ಎಲ್ಲಾ ಬಿ. ಇ. ಓ.ಗಳು, ಸೇವಾ ಸಿಂಧು ಪೋರ್ಟಲ್ ನ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಚೇತನ್, ಸಾಲಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಮುರುಳಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ಶಿಕ್ಷಕರು ಉಪಸ್ಥಿತರಿದ್ದರು.














