ಭಾರತದ ಭಯೋತ್ಪಾದನೆ ನಿರ್ಮೂಲನೆ ಮಾಡಲು ಹೊಸ ಅಸ್ತ್ರವನ್ನು ಪ್ರಯೋಗಿಸಿದೆ. ಈ ಬಾರಿ ಪಾಕ್ ಹಾಗೂ ಭಯೋತ್ಪಾದನೆ ಕೃತ್ಯಕ್ಕೆ ಒಂದು ಪೂರ್ಣವಿರಾಮ ಹಾಕುವ ಲಕ್ಷಣಗಳು ಗೋಚರಿಸುತ್ತಿದೆ. ಹೌದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ 26 ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿದೆ. ಇದಕ್ಕೆ ಪ್ರತಿಕಾರವಾಗಿ ಭಾರತ ಕೂಡ ಮೇ 7ರಂದು ಆಪರೇಷನ್ ಸಿಂಧೂರ್ ಮೂಲಕ ಮಹತ್ವದ ಉತ್ತರವನ್ನು ನೀಡಿತ್ತು.
ಇದೀಗ ಜಗತ್ತಿನ ಮುಂದೆ ಪಾಕ್ ಹಾಗೂ ಭಯೋತ್ಪಾದಕರನ್ನು ಬೆತ್ತಲೆ ಮಾಡಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ಭಾರತ ಸರ್ಕಾರ ಸರ್ವಪಕ್ಷದ ಸಹಕಾರದೊಂದಿದೆ ಪಾಕ್ಗೆ ಬುದ್ಧಿ ಕಲಿಸಲು ಮುಂದಾಗಿದೆ. ಸರ್ವಪಕ್ಷ ನಿಯೋಗವನ್ನು ಭಾರತದ ಮಿತ್ರರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತ ಹೊಂದಿದೆ ಎಂದು ಸಾರುವ ಕೆಲಸ ಮಾಡಲಿದೆ. ಈ ನಿಯೋಗದ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ನೀಡಲಾಗಿದೆ. ಇದು ಅಚ್ಚರಿಯೂ ಹೌದು, ಸತ್ಯವು ಹೌದು. ಕಾಂಗ್ರೆಸ್ ಬಿಜೆಪಿ ವಿರೋಧ ಪಕ್ಷಗಳಾಗಿದ್ದರು, ದೇಶದ ವಿಷಯ ಬಂದಾಗ ಒಟ್ಟಾಗಿರಬೇಕು ಎಂದು ಈ ಮೂಲಕ ಹೇಳಿದೆ.
ಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರವನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ತಮ್ಮ ಪಕ್ಷದಲ್ಲೇ ಟೀಕೆಗೆ ಒಳಗಾಗಿದ್ದರು. ಇದೀಗ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಂತರ ನಡೆಯುತ್ತಿರುವ ಪ್ರಮುಖ ಸಂಪರ್ಕ ಕಾರ್ಯಾಚರಣೆಯನ್ನು ಕೈಗೊಳ್ಳಲು ಸರ್ಕಾರ ಶನಿವಾರ ತರೂರ್ ಮತ್ತು ವಿರೋಧ ಪಕ್ಷದ ಇಬ್ಬರು ಮತ್ತು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಲ್ವರು ಸೇರಿದಂತೆ ಆರು ಇತರ ಸಂಸದರನ್ನು ಈ ನಿಯೋಗದಲ್ಲಿ ಹೆಸರಿಸಿದೆ .
ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎಕ್ಸ್ ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಭಾರತದ “ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸಂದೇಶ”ವನ್ನು ಹೊತ್ತುಕೊಂಡು ಏಳು ಸರ್ವಪಕ್ಷ ನಿಯೋಗಗಳು ಶೀಘ್ರದಲ್ಲೇ ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ರಾಜಕೀಯವನ್ನು ಮೀರಿ, ಭಿನ್ನಾಭಿಪ್ರಾಯಗಳನ್ನು ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ ಇದು ಎಂದು ಎಕ್ಸ್ನಲ್ಲಿ ಹೇಳಿಕೊಂಡಿದ್ದಾರೆ. ಈ ಸರ್ವಪಕ್ಷ ನಿಯೋಗದಲ್ಲಿ ಮಾಜಿ ರಾಜತಾಂತ್ರಿಕರಾಗಿರುವ ಶಶಿ ತರೂರ್, ಕೇಂದ್ರವು ವಿರೋಧ ಪಕ್ಷದ ನಾಯಕರಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೋಳಿ ಕರುಣಾನಿಧಿ ಮತ್ತು ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ ಪ್ರಮುಖರಾಗಿ ಕೆಲಸ ಮಾಡಲಿದ್ದಾರೆ. ಈ ನಿಯೋಗಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರನ್ನು ಭೇಟಿ ಮಾಡಲಿವೆ.
ಈ ನಿಯೋಗಗಳು ಭಾರತದ ರಾಷ್ಟ್ರೀಯ ಒಮ್ಮತ ಮತ್ತು ಎಲ್ಲಾ ರೂಪದ ಮತ್ತು ಅಭಿವ್ಯಕ್ತಿ ಭಯೋತ್ಪಾದನೆಯನ್ನು ಎದುರಿಸಲು ದೃಢ ಸಂಕಲ್ಪ ವಿಧಾನ ಪ್ರದರ್ಶಿಸುತ್ತವೆ ಎಂದು ಕೇಂದ್ರ ಸಚಿವಾಲಯ ಹೇಳಿದೆ. ಈ ನಿಯೋಗದಲ್ಲಿ ಬಿಜೆಪಿ ನಾಯಕರಾದ ನಿಶಿಕಾಂತ್ ದುಬೆ, ಬಾನ್ಸುರಿ ಸ್ವರಾಜ್, ಅನುರಾಗ್ ಠಾಕೂರ್, ಎಂಜೆ ಅಕ್ಬರ್, ಸಾಮಿಕ್ ಭಟ್ಟಾಚಾರ್ಯ, ದಗ್ಗುಬಾಟಿ ಪುರಂದೇಶ್ವರಿ ಮತ್ತು ಎಸ್ಎಸ್ ಅಹ್ಲುವಾಲಿಯಾ ಇರಲಿದ್ದಾರೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ , ಕಾಂಗ್ರೆಸ್ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಮನೀಶ್ ತಿವಾರಿ, ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಗುಲಾಮ್ ನಬಿ ಆಜಾದ್, ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, ಬಿಜು ಜನತಾದಳದ ಸಸ್ಮಿತ್ ಪಾತ್ರ, ಆಮ್ ಆದ್ಮಿ ಪಕ್ಷದ ವಿಕ್ರಮ್ಜೀತ್ ಸಾಹ್ನಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಸಂಸದ ಜಾನ್ ಬ್ರಿಟ್ಟಾಸ್ ಕೂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇನ್ನು ಕೇಂದ್ರ ಸರ್ಕಾರ ಸರ್ವಪಕ್ಷ ನಿಯೋಗಕ್ಕೆ ಕಾಂಗ್ರೆಸ್ ಪಕ್ಷದಿಂದ ಕೆಲವೊಂದು ಸಂಸದರ ಹೆಸರು ಸೂಚಿಸುವಂತೆ ಹೇಳಿತ್ತು. ಆದರೆ ಕಾಂಗ್ರೆಸ್ ಸೂಚಿಸಿದ ಸಂಸದರ ಹೆಸರನ್ನು ಬಿಟ್ಟು, ಶಶಿ ತರೂರ್ ಸೇರಿದಂತೆ ಇತರ ನಾಯಕ ಹೆಸರನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಸೂಚಿಸಿದ ಸಂಸದರ ಹೆಸರನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ, ಲೋಕಸಭೆ ಸಂಸದ ಹಾಗೂ ಉಪನಾಯಕ ಗೌರವ್ ಗೊಗೊಯ್, ಕರ್ನಾಟಕದ ಸಂಸದ ಡಾ. ಸೈಯದ್ ನಸೀರ್ ಹುಸೇನ್, ಸಂಸದ ರಾಜಾ ಬ್ರಾರ್ರ ಹೆಸರು ಒಳಗೊಂಡಿದೆ.ಕಾಂಗ್ರೆಸ್ ನೀಡಿದ ಪಟ್ಟಿಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಡಾ. ಸೈಯದ್ ನಸೀರ್ ಹುಸೇನ್ ಹೆಸರೂ ಒಳಗೊಂಡಿತ್ತು. ಇವರು ರಾಜ್ಯಸಭೆಗೆ ಆಯ್ಕೆಯಾದ ಸಂದರ್ಭದಲ್ಲಿ ಅವರು ಬೆಂಗಲಿಗರು ಕರ್ನಾಟಕ ವಿಧಾನಸೌಧದ ಆವರಣದಲ್ಲಿ ‘‘ಪಾಕಿಸ್ತಾನ ಜಿಂದಾಬಾದ್’’ ಎಂದು ಘೋಷಣೆ ಕೂಗಿದ್ದು ದೇಶ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು ಎಂಬುದು ಗಮನಾರ್ಹ. ಇದೀಗ ಕೇಂದ್ರಕ್ಕೆ ಕಾಂಗ್ರೆಸ್ ಕಳುಹಿಸಿದ ಪಟ್ಟಿಯಲ್ಲಿ ಅವರ ಹೆಸರು ಕೂಡ ಇತ್ತು. ಆದರೆ ಕೇಂದ್ರ ಸರ್ಕಾರ ಆ ಪಟ್ಟಿಯನ್ನು ತಿರಸ್ಕರಿಸಿ, ಬೇರೆ ಸಂಸದರನ್ನು ಈ ನಿಯೋಗಕ್ಕೆ ಆಯ್ಕೆ ಮಾಡಿದೆ.














