ಮಂಡ್ಯ: ನಗರದ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಸರ್ವೆ ನಡೆಸಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಸಿದ್ಧ ಪಡಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಇಂದು (ಜೂ.18) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಅಡಿ ಅರ್ಹ ಫಲಾನುಭವಿಗಳಿಗೆ ಸವಲತ್ತು ನೀಡಿ ಎಂದು ಸೂಚಿಸಿದರು.
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಗಳಡಿ ನಿರ್ಮಿಸಲಾಗುತ್ತಿರುವ ವಸತಿಗಳ ಕಾಮಗಾರಿಯನ್ನು ಚುರುಕುಗೊಳಿಸಿ ಪೂರ್ಣಗೊಳಿಸಿ ಎಂದು ತಾಕೀತು ಮಾಡಿದರು.
ನಗರ ಪ್ರದೇಶಗಳಿಗೆ ನೀಡಲಾಗುವ ನೀರಿನ ಗುಣಮಟ್ಟವನ್ನು ನಿಗಧಿತ ಅವಧಿಯೊಳಗೆ ಪರೀಕ್ಷೆ ನಡೆಸಿ, ನೀರಿನ ಗುಣಮಟ್ಟ ಪರೀಕ್ಷಿಸಲು ಪ್ರತಿದಿನ ಕನಿಷ್ಟ ಮೂರು ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಯ ನಂತರ ಅಗತ್ಯ ಪ್ಯಾರಾಮೀಟರ್ ಗಳಿಗಿಂತ ಕಮ್ಮಿ ಗುಣಮಟ್ಟವಿರುವ ಕುಡಿಯುವ ನೀರಿನ ಮಾದರಿ ಕಂಡುಬAದಲ್ಲಿ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ನಗರ ಭಾಗಗಳಲ್ಲಿ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ನಿರ್ವಹಿಸದೆ ಇರುವುದು ಗಮನಕ್ಕೆ ಬಂದಿದೆ, ಟೆಂಡರ್ ದಾರರೊಂದಿಗೆ ಮಾತನಾಡಿ ಸರಿಯಾಗಿ ವಿಲೇವಾರಿ ಮಾಡಿಸಿ, ಇಲ್ಲವಾದಲ್ಲಿ ಟೆಂಡರ್ ರದ್ದು ಪಡಿಸಿ ಎಂದು ನಿರ್ದೇಶನ ನೀಡಿದರು.
ನಗರ ಪ್ರದೇಶಗಳ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಪಾಂಡವಪುರ, ಬೆಳ್ಳೂರು, ನಾಗಮಂಗಲ ಹಿಂದುಳಿದಿದೆ, ನೀರಿನ ಶುಲ್ಕ ಪಾವತಿಯಲ್ಲಿ ನಾಗಮಂಗಲ ಮತ್ತು ಮಂಡ್ಯ ನಗರಗಳಲ್ಲಿ ನೀರಿನ ಶುಲ್ಕವನ್ನು ಹೆಚ್ಚಾಗಿ ಉಳಿಸಿಕೊಂಡಿದ್ದಾರೆ ತೆರಿಗೆ ಪಾವತಿಸದೆ ಇವವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್, ನಗರಸಭೆ ಅಧ್ಯಕ್ಷೆ ಪಂಪಶ್ರೀ, ನಗರಾಭಿವೃದ್ಧಿ ಕೋಶಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರತಾಪ್, ನಗರಸಭೆ ಪರಿಸರ ಅಭ್ಯಂತರ ರುದ್ರೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.














