ಮನೆ ರಾಜ್ಯ ತಜ್ಞರ ವರದಿಯಲ್ಲಿ ಆತಂಕಕಾರಿ ಮಾಹಿತಿ ಧೂಮಪಾನಿಗಳಲ್ಲಿಯೇ ಹೃದಯಾಘಾತ ಹೆಚ್ಚು

ತಜ್ಞರ ವರದಿಯಲ್ಲಿ ಆತಂಕಕಾರಿ ಮಾಹಿತಿ ಧೂಮಪಾನಿಗಳಲ್ಲಿಯೇ ಹೃದಯಾಘಾತ ಹೆಚ್ಚು

0

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ನೇತೃತ್ವದ ೧೨ ತಜ್ಞರ ತಂಡವು ಈ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಶೇ.೫೦ಕ್ಕಿಂತ ಹೆಚ್ಚು ಹೃದಯಾಘಾತಗಳು ಧೂಮಪಾನಿಗಳಲ್ಲಿ ಕಂಡುಬಂದಿದೆ.
ಧೂಮಪಾನ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಪ್ರಮುಖ ಕಾರಣವೆಂಬುದಾಗಿ ತಜ್ಞರ ವರದಿಯಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧ ಜಾರಿಯಲ್ಲಿದ್ದು, ಅದರ ಕಡ್ಡಾಯವಾಗಿ ಪಾಲಿಸುವುದನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಡಾ.ಕೆ.ಎಸ್.ರವೀಂದ್ರನಾಥ್, ರಾಜ್ಯದಲ್ಲಿ ೨೫೦ ಜನರ ಮೇಲೆ ಅಧ್ಯಯನ ನಡೆಸಿದ್ದು, ಶೇ.೯೮ರಷ್ಟು ಮಂದಿ ಲಸಿಕೆ ಪಡೆದಿದ್ದರು. ಆದರೆ ಮಧುಮೇಹ, ಒತ್ತಡ, ಧೂಮಪಾನ ಹಾಗೂ ಒಬೆಸಿಟಿಯಂತಹ ಜೀವಶೈಲಿಯ ಸಂಗತಿಗಳು ಪ್ರಮುಖ ಕಾರಣಗಳಾಗಿವೆ. ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೆ ನೇರ ಸಂಬಂಧ ಇಲ್ಲ ಎಂದು ಮಾಹಿತಿ ನೀಡಿದರು. ಇನ್ನೂ, ತಜ್ಞರ ವರದಿಯ ಪ್ರಕಾರ, ಒಟ್ಟು ೨೫೧ ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ೨೧೮ ಜನ ಪುರುಷರಿದ್ದು, ೩೩ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ೨೫೧ ರೋಗಿಗಳಲ್ಲಿ ೮೭ ಮಂದಿಯಲ್ಲಿ ಮಧುಮೇಹ ಕಂಡುಬಂದಿದೆ. ೧೦೨ ರೋಗಿಗಳಿಗೆ ಬಿಪಿ, ೩೫ ಸಕ್ಕರೆ ಕಾಯಿಲೆ ಇದೆ.

೪೦ ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ೧೧೧ ಮಂದಿ ಧೂಮಪಾನಿಗಳಾಗಿದ್ದಾರೆ. ೧೯ ಮಂದಿಗೆ ಕೊವಿಡ್ ಸೋಂಕೊನ ಹಿನ್ನೆಲೆ ಇತ್ತು. ಇನ್ನುಳಿದ ೭೭ ಮಂದಿಗೆ ಯಾವುದೇ ರೋಗಗಳು ಇರಲಿಲ್ಲ ಎಂದು ಹೇಳಲಾಗಿದೆ.
ಸದ್ಯ ನ್ಯೂರಾಲಜಿಕಲ್ ಸಮಸ್ಯೆಯ ಅಧ್ಯಯನ ಬಾಕಿ ಇದ್ದು, ನಿಮ್ಹಾನ್ಸ್ ತಜ್ಞರು ವರದಿ ಕೊಟ್ಟ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅತಿಹೆಚ್ಚು ಹೃದಯಾಘಾತಕ್ಕೆ ಕಾರಣ: ಅತಿಯಾದ ಮೊಬೈಲ್ ಬಳಕೆ, ಜನರ ಬದುಕಿನ ಶೈಲಿ, ಮಧುಮೇಹ, ಒಬೆಸಿಟಿ (ಅತಿಯಾದ ಬೊಜ್ಜು), ಹೆಚ್ಚಿನ ತೂಕ ಮತ್ತು ಕೋವಿಡ್ ಸಂದರ್ಭದಲ್ಲಿ ಇತರೆ ಔಷಧಿ ಬಳಕೆಯೂ ಅತಿ ಹೆಚ್ಚು ಹೃದಯಾಘಾತಕ್ಕೆ ಕಾರಣ ಎನ್ನಲಾಗಿದೆ.