ಮನೆ ರಾಜ್ಯ ಪ್ರತ್ಯೇಕ ರಾಜ್ಯ ಕುರಿತ ಸಚಿವ ಉಮೇಶ್‌ ಕತ್ತಿ ಹೇಳಿಕೆಗೆ ಎಚ್‌.ಸಿ. ಮಹದೇವಪ್ಪ ತೀವ್ರ ಖಂಡನೆ

ಪ್ರತ್ಯೇಕ ರಾಜ್ಯ ಕುರಿತ ಸಚಿವ ಉಮೇಶ್‌ ಕತ್ತಿ ಹೇಳಿಕೆಗೆ ಎಚ್‌.ಸಿ. ಮಹದೇವಪ್ಪ ತೀವ್ರ ಖಂಡನೆ

0

ಮೈಸೂರು(Mysuru) : ಡಬಲ್ ಇಂಜಿನ್ ಸರ್ಕಾರದ ಹೆಸರಲ್ಲಿ ಅಧಿಕಾರದಲ್ಲಿದ್ದರೂ ಕೂಡಾ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟು, ಉತ್ತರ ಕರ್ನಾಟಕಕ್ಕೆ ಬಂದ ಯೋಜನೆಗಳನ್ನೆಲ್ಲಾ ವಾಪಸ್ ಕಳಿಸಿರುವ ಇವರಿಗೆ ಪ್ರತ್ಯೇಕ ರಾಜ್ಯದ ಕುರಿತಂತೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ.

ಲೋಕಸಭೆಯ ಚುನಾವಣೆಯ ನಂತರ ಕರ್ನಾಟಕವನ್ನು ವಿಭಜನೆ ಮಾಡುವುದರ ಕುರಿತು ಸಚಿವ ಉಮೇಶ್‌ ಕತ್ತಿ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವೀಟರ್‌ ನಲ್ಲಿ,  ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಿಡಿದು ಎಷ್ಟೋ ಮಂದಿ ಕನ್ನಡ ಹೋರಾಟಗಾರರು ಸಂವಿಧಾನಾತ್ಮಕ ಗಣರಾಜ್ಯವಾಗಿದ್ದ ಭಾರತದಲ್ಲಿ ಕರ್ನಾಟಕವೂ ಕೂಡಾ ಭಾಷಾವಾರು ಪ್ರಾಂತ್ಯವಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ 1956 ರ ನವೆಂಬರ್ 1ರಂದು ನಮ್ಮ ರಾಜ್ಯವು ಆಡಳಿತ ವ್ಯಾಪ್ತಿಗೆ ಬಂದಿತು. 1973 ನವೆಂಬರ್ 1 ರಂದು ಕರ್ನಾಟಕ ಎಂದು ಪುನರ್ ನಾಮಕರಣಗೊಂಡಿತು.

ಇಂತಹ ಹೋರಾಟದ ಇತಿಹಾಸ ಇರುವ ಕರ್ನಾಟಕವನ್ನು ಲೋಕಸಭೆಯ ಚುನಾವಣೆ ನಂತರದಲ್ಲಿ ವಿಭಜಿಸುವ ಕುರಿತು ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ಅವರ ಮಾತುಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಡಬಲ್ ಇಂಜಿನ್ ಸರ್ಕಾರದ ಹೆಸರಲ್ಲಿ ಅಧಿಕಾರದಲ್ಲಿದ್ದರೂ ಕೂಡಾ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟು, ಉತ್ತರ ಕರ್ನಾಟಕಕ್ಕೆ ಬಂದ ಯೋಜನೆಗಳನ್ನೆಲ್ಲಾ ವಾಪಸ್ ಕಳಿಸಿರುವ ಇವರಿಗೆ ಪ್ರತ್ಯೇಕ ರಾಜ್ಯದ ಕುರಿತಂತೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಹಿಂದೆ ಕನ್ನಡ ಹೋರಾಟಗಾರರ ಬಂಧನವಾದಾಗ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್ ಆರ್ ಬೊಮ್ಮಾಯಿ ಅವರು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಇಂತಹ  ಕನ್ನಡ ಮತ್ತು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ ಉಮೇಶ್ ಕತ್ತಿಯವರ ಮೇಲೆ ಕ್ರಮ ವಹಿಸುತ್ತಾರೆ ಎಂಬ ನಂಬಿಕೆ ನನ್ನದು. ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಂಡು 40% ಕಮಿಷನ್ ಲೂಟಿಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಅಭಿವೃದ್ಧಿಯನ್ನೇ ಮಾಡದೇ ಕೇವಲ ಅಧಿಕಾರದ ದುರಾಸೆಗಾಗಿ ರಾಜ್ಯದ ವಿಭಜನೆಯ ಬಗ್ಗೆ ಮಾತನಾಡುತ್ತಿರುವುದನ್ನು ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರೂ ಕೂಡಾ ಖಂಡಿಸಬೇಕು ಎಂದು ಬರೆದುಕೊಳ್ಳುವ ಮೂಲಕ  ಆಕ್ರೋಶ ವ್ಯಕ್ತಪಡಿಸಿದ್ದಾರೆ.