ಬೆಂಗಳೂರು : ರಾಜ್ಯ ಚುನಾವಣಾ ಆಯೋಗಕ್ಕೆ ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಲೋಪದೋಷ ಸರಿಪಡಿಸುವಂತೆ ಒತ್ತಾಯಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ), ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪದೋಷಗಳಿದ್ರೆ ಸರಿಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಜ್ಯ ಚುನಾವಣೆ ಆಯುಕ್ತ ಜಿ ಎಸ್ ಸಂಗ್ರೇಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಶಾಸಕರಾದ ರಿಜ್ವಾನ್ ಅರ್ಷದ್, ಎ.ಸಿ. ಶ್ರೀನಿವಾಸ್, ಎಂಎಲ್ಸಿಗಳಾದ ಪುಟ್ಟಣ್ಣ, ಶ್ರೀನಿವಾಸ್ ಮತ್ತಿತರರು ನಿಯೋಗದಲ್ಲಿದ್ದರು. ಬಳಿಕ ಮಾತನಾಡಿದ ಡಿಕೆಶಿ, ಹಿಂದೆ ರಾಜ್ಯ ಚುನಾವಣಾ ಆಯೋಗ ವೋಟರ್ ಲಿಸ್ಟ್ ಮಾಡಿತ್ತು. ಒಂದೇ ಮನೆಯಲ್ಲಿನ ಎರಡು ವೋಟನ್ನು ಬೇರೆ ಬೂತ್ಗೆ ಹಾಕಿದ್ದಾರೆ. ಮ್ಯಾಪಿಂಗ್ ಸರಿಯಾಗಿ ಆಗ್ತಿಲ್ಲ, ಯಾವುದೇ ರಾಜಕೀಯ ಪಕ್ಷದವರಿದ್ದರೂ ಬಿಎಲ್ಓಗಳನ್ನು ಕರೆದುಕೊಂಡು ಹೋಗಬೇಕು. ಸ್ಟ್ರೀಟ್, ಮನೆ, ಮತ ಮ್ಯಾಪಿಂಗ್ ಆಗಬೇಕು. ಈ ದೃಷ್ಟಿಯಿಂದ ಹಿಂದೆ ಲೋಪ ಆಗಿರೋದು ಸರಿ ಆಗಬೇಕು ಎಂದು ಒತ್ತಾಯಿಸಿದರು.
ನ್ಯಾಯಬದ್ಧವಾಗಿ ಕಾನೂನು ಚೌಕಟ್ಟಿನಲ್ಲಿ ವೋಟರ್ ಲಿಸ್ಟ್ ಮಾಡಬೇಕು. ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ಮಾಡ್ತಿರೋದ್ರಿಂದ ಬಿಎಲ್ಓ ಹಾಗೂ ರಾಜಕೀಯ ನಾಯಕರು ಜಾಗೃತರಾಗಬೇಕು. ಪರಿಶುದ್ಧವಾದ ವೋಟರ್ ಲಿಸ್ಟ್ ಮಾಡಬೇಕು. ಜಿಬಿಎ, ಜಿ.ಪಂ, ತಾ.ಪಂ ಚುನಾವಣಾ ಇದೆ, ಎಲ್ಲಿಯೂ ಕೂಡ ತಾರತಮ್ಯ ಆಗಬಾರದು. ಅಲ್ಪಸಂಖ್ಯಾತರು, ಒಬಿಸಿ ವೋಟ್ ತೆಗೆದಿದ್ದಾರೆ, ಆಗದವರ ವೋಟ್ ಅನ್ನು ಶಿಫ್ಟ್ ಮಾಡಿದ್ದಾರೆ. ಕೆಲವು ಡಬಲ್, ತ್ರಿಬಲ್ ವೋಟ್ ಆಗಿದೆ, ಅದನ್ನ ರೀ-ವೆರಿಫೈ ಮಾಡಬೇಕು ಅಂತಾ ಆಗ್ರಹಿಸಿದರು. ರಾಜ್ಯ ಚುನಾವಣಾ ಆಯೋಗಕ್ಕೆ ಪ್ರತ್ಯೇಕವಾಗಿ ಮತದಾರರ ಪರಿಷ್ಕರಣೆ ಮಾಡಲು ಅವಕಾಶ ಇದೆ. ನಾವು ರಾಜ್ಯ ಚುನಾವಣಾ ಆಯೋಗಕ್ಕೆ ಜವಾಬ್ದಾರಿ ಕೊಟ್ಟಿದ್ದೇವೆ. ಹಿಂದೆ ಮಾಡಿರೋ ಮತದಾರರ ಪಟ್ಟಿ ಸರಿಯಿಲ್ಲ ಎಂದು ಹೇಳಿದ್ದೇವೆ ಎಂದು ಸ್ಪಷ್ಟಪಡಿಸಿದರು.















