ಬೆಂಗಳೂರು : ರಾಜ್ಯಸಭೆಗೆ ದೇವೇಗೌಡರನ್ನ ಮರು ಆಯ್ಕೆ ಮಾಡೋದು ಬಿಜೆಪಿ ಹೈಕಮಾಂಡ್ಗೆ ಬಿಟ್ಟ ವಿಚಾರ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ದೇವೇಗೌಡರ ಹುಟ್ಟುಹಬ್ಬದ ಹಿನ್ನೆಲೆ ಕುಟುಂಬ ಸಮೇತ ಶುಭಾಶಯ ಕೋರಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ದೇವೇಗೌಡರ ರಾಜ್ಯಸಭೆ ಅವಧಿ ಮುಕ್ತಾಯ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಆದಾಗ ನಾವು ಯಾವುದೇ ಷರತ್ತು ಹಾಕಿಲ್ಲ. ಪ್ರಧಾನಿ ಮೋದಿ ಅವರು ದೇವೇಗೌಡರಿಗೆ ವಿಶೇಷ ಗೌರವ ಕೊಡುತ್ತಾರೆ. ಹೀಗಾಗಿ ಇದು ಬಿಜೆಪಿ ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಬಗ್ಗೆ ನಮ್ಮ ಒತ್ತಾಯ ಏನು ಇಲ್ಲ. ಬಿಜೆಪಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿ ಎಂದಿದ್ದಾರೆ.
ಜಿಟಿ ದೇವೇಗೌಡರ ಕ್ಷೇತ್ರದಲ್ಲಿ ಸಮಾವೇಶ ಮಾಡಿದ ವಿಚಾರವಾಗಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಕ್ಷೇತ್ರ. ಹೀಗಾಗಿ ನಿನ್ನೆ ಸಮಾವೇಶ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಬಂದಿದ್ದರು. ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಜಿಟಿ ದೇವೇಗೌಡರ ವಿಷಯದ ಬಗ್ಗೆ ನಾನೇನು ಮಾತನಾಡುವುದಿಲ್ಲ.
ಕುಮಾರಸ್ವಾಮಿ, ದೇವೇಗೌಡರು ಅದರ ಬಗ್ಗೆ ನಿರ್ಧಾರ ಮಾಡುತ್ತಾರೆ. ಎಲ್ಲವೂ ಜನರಿಗೆ ಗೊತ್ತಿದೆ. ಹೀಗಾಗಿ ಈ ವಿಷಯಗಳು ಬಹಿರಂಗವಾಗಿ ಮಾತಾನಾಡೋಕೆ ಆಗಲ್ಲ. ನಾಲ್ಕು ಗೋಡೆ ಮಧ್ಯೆ ಮಾತಾಡಬೇಕು. ಸಮಯ ಬಂದಾಗ ಪಕ್ಷದ ವರಿಷ್ಠರು ಕೂತು ಮಾತಾಡ್ತಾರೆ ಎಂದು ಹೇಳಿದ್ದಾರೆ.
















