ವಿಜಯಪುರ : ಸಾಲದ ವಿಷಯಕ್ಕೆ ದಂಪತಿ ಮಧ್ಯೆ ನಡೆದ ಜಗಳ ತಾರಕಕ್ಕೇರಿ ರಾಡ್ನಿಂದ ಹೊಡೆದು ಪತ್ನಿಯನ್ನು ಹತ್ಯೆಗೈದು ಮನೆಯಲ್ಲೇ ಶವ ಹೂತುಹಾಕಿದ್ದ ಭಯಾನಕ ಘಟನೆ 24 ದಿನಗಳ ಬಳಿಕ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಬೆಳಕಿಗೆ ಬಂದಿದೆ. ಹಂತಕ ಪತಿಯನ್ನು ಪ್ರಭು ರತ್ನಾಕರ್ (46) ಹಾಗೂ ಮೃತ ಪತ್ನಿಯನ್ನು ಸರೋಜಿನಿ ರತ್ನಾಕರ (45) ಎಂದು ಗುರುತಿಸಲಾಗಿದೆ.
ಈ ಸಂಬಂಧ ಸರೋಜಿನಿ ತಾಯಿ ಕಮಲವ್ವ ಅವರು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪತ್ನಿ ಸರೋಜಿನಿ ಹೆಸರಲ್ಲಿ ಪ್ರಭು ಸಿಕ್ಕಾಪಟ್ಟೆ ಸಾಲ ಮಾಡಿದ್ದ. ಸಾಲದ ವಿಷಯವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅದೇ ರೀತಿ ಜ.23ರಂದು ರಾತ್ರಿ ಇಬ್ಬರ ಮಧ್ಯೆ ಜಗಳವಾಗಿತ್ತು.
ಜ.24ರಂದು ಸರೋಜಿನಿ ತಲೆಗೆ ಪತಿ ಹಾರಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲೇ ಶವ ಹೂತು ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 24 ದಿನಗಳ ನಂತರ ಕೃತ್ಯ ಬಯಲಾಗಿದ್ದು, ಸದ್ಯ ದೇವರಹಿಪ್ಪರಗಿ ಪೊಲೀಸರು ಶವ ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ.















