ತಿರುವನಂತಪುರಂ : ದೇವಾಲಯದ ಆವರಣದಲ್ಲಿ ಉತ್ಸವದ ಆನೆಯೊಂದು ಅರ್ಚಕನನ್ನು ತನ್ನ ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಅರ್ಚಕ ಗಂಭೀರ ಗಾಯಗೊಂಡಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
ಅನ್ನಮನದ ಮಹಾದೇವ ದೇವಾಲಯದಲ್ಲಿ ಮೆರವಣಿಗೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಆನೆಯನ್ನು ಅಲಂಕರಿಸಿ ದೇವಾಲಯದ ಆವರಣಕ್ಕೆ ಧಾರ್ಮಿಕ ಮೆರವಣಿಗೆಗಾಗಿ ತರಲಾಯಿತು. ದೇವರ ವಿಗ್ರಹವನ್ನು ಆನೆಯ ಮೇಲೆ ಇರಿಸಲು ಸಿದ್ಧತೆಗಳು ನಡೆಯುತ್ತಿದ್ದಾಗ, ಮಾವುತ ಅರ್ಚಕರೊಬ್ಬರು ಆನೆಯ ಮೇಲೆ ಹತ್ತಲು ಸಹಾಯ ಮಾಡುತ್ತಿದ್ದರು. ಈ ವೇಳೆ ಉದ್ರೇಕಗೊಂಡ ಆನೆ ಹತ್ತಿರದಲ್ಲಿ ನಿಂತಿದ್ದ ಮತ್ತೊಬ್ಬ ಅರ್ಚಕನನ್ನು ಏಕಾಏಕಿ ಸೊಂಡಿಲಿನಿಂದ ಎತ್ತಿ ಪಕ್ಕಕ್ಕೆ ಎಸೆದಿದೆ.
ಘಟನೆ ನಡೆದ ತಕ್ಷಣವೇ ಮಾವುತ ಆನೆಯ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅರ್ಚಕನನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆನೆ ಅರ್ಚಕನನ್ನು ಎತ್ತಿ ಬಿಸಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.















