ಶಿವಮೊಗ್ಗ : ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಜನ್ಮ ದಿನವನ್ನ ಅತ್ಯಂತ ವಿಭಿನ್ನ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿದ್ದಾರೆ. ತಾವು ಪ್ರತಿನಿಧಿಸುವ ಸೊರಬ ಕ್ಷೇತ್ರದ ಸೊರಬ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ಮಾಡಿಸುವ ಮೂಲಕ ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಪ್ರತಿನಿತ್ಯ ತಮ್ಮ ಕಾಯಕದ ಮೂಲಕ ನಗರವನ್ನ ಸ್ವಚ್ಛ ಮಾಡಲು ಶ್ರಮಿಸುವ 36 ಜನ ಪೌರಕಾರ್ಮಿಕರನ್ನ ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಉಚಿತವಾಗಿ ವಿಮಾನಯಾನ ಮಾಡಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ 36 ಜನ ಪೌರ ಕಾರ್ಮಿಕರು, ಸೊರಬ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕ ಪಡೆದ 30 ಮಕ್ಕಳು ಮತ್ತು ಅವರ ಪೋಷಕರು ಸೇರಿದಂತೆ ಒಟ್ಟು 60 ಜನ ಸೇರಿದಂತೆ 100ಕ್ಕೂ ಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಸಿದರು.
ಎಲ್ಲರೂ ರೈಲು ಮತ್ತು ಬಸ್ಗಳಲ್ಲಿ ಮಾತ್ರ ಪ್ರಯಾಣ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಎಲ್ಲರೂ ಒಟ್ಟಾಗಿ ಶಿವಮೊಗ್ಗ ಏರ್ಪೋರ್ಟ್ ಮೂಲಕ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಪಯಣ ಬೆಳೆಸಿ ಖುಷಿಪಟ್ಟರು. ಅವರ ಜೊತೆ ಖುದ್ದು ಸಚಿವ ಮಧು ಬಂಗಾರಪ್ಪ ಪ್ರಯಾಣಿಸುವ ಮೂಲಕ ಅವರ ಖುಷಿಯಲ್ಲಿ ಭಾಗಿಯಾಗಿದ್ದರು.















