ಬೆಂಗಳೂರು : ಪಕ್ಷ ಕಟ್ಟಲು ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಜಮೀರ್ ಜೆಡಿಎಸ್ಗೆ ಬರೋ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಮ್ಮನೇ ಮಾಧ್ಯಮದಲ್ಲಿ ಬರ್ತಿರುವ ವಿಚಾರ ಅದು. ಅವರು ಈಗಾಗಲೇ ಈ ವಿಚಾರಕ್ಕೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ಸ್ಥಾನಮಾನ ಕೊಟ್ಟಿದೆ. ಅವರ ಬಗ್ಗೆ ಚರ್ಚೆ ಬೇಡ, ನಮ್ಮ ಪಾರ್ಟಿ ಕಟ್ಟೋಕೆ ಕಾರ್ಯಕರ್ತರಿದ್ದಾರೆ. ನಮ್ಮ ಕಾರ್ಯಕರ್ತರು ಹೋರಾಟಕ್ಕೆ ಸಿದ್ಧರಿದ್ದಾರೆ. ಪಕ್ಷ ಯಾರನ್ನ ನೆಚ್ಚಿಕೊಂಡಿಲ್ಲ ಅಂತ ಜಮೀರ್ಗೆ ತಿರುಗೇಟು ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೇಲೆ ಮಾಟ ಮಂತ್ರ ಮಾಡಿದ್ದಾರೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಮಾಟ ಮಂತ್ರದ ಬಗ್ಗೆ ಅಷ್ಟು ಅರಿವಿಲ್ಲ. ನಾವು ದೈನಂದಿನ ಜೀವನದಲ್ಲಿ ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮ್ಮಿಂದ ನಾಲ್ಕು ಜನರಿಗೆ ಒಳ್ಳೆಯದು ಆಗಬೇಕು ಎಂದು ತಿಳಿಸಿದ್ದಾರೆ. ಅಲ್ಪಸಂಖ್ಯಾತರು ಜೆಡಿಎಸ್ ಕಡೆಗೆ ಮುಖ ಮಾಡುವ ವಿಚಾರವಾಗಿ ಮಾತನಾಡಿ, ಸಿಎಂ ಅವರು ಯಾವಾಗಲೂ ಅಹಿಂದ ರಾಜಕಾರಣಿ ಅಂತ ಹೇಳ್ತಾರೆ. ಅಹಿಂದದಲ್ಲಿ ಅ ಮತ್ತು ದ ಅನ್ನೋದು ಉರುಳಿ ಹೋಗಿದೆ. ರಾಜಣ್ಣ, ನಾಗೇಂದ್ರ ಅವರನ್ನ ಸಚಿವ ಸಂಪುಟದಿಂದ ಕೈಬಿಟ್ಟಾಗಿದೆ. ಜಬ್ಬಾರ್, ನಜೀರ್ ತಲೆದಂಡ ಆಗಿದೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿದ್ದಾರೆ.
ಆ ಕ್ಷೇತ್ರದಲ್ಲಿ ಮುಸ್ಲಿಂ ಬಾಂದವರಿಗೆ ಟಿಕೆಟ್ ಕೊಡಬೇಕಿತ್ತು. ಅಲ್ಲಿ ಜಬ್ಬಾರ್, ನಜೀರ್ ಕೈ ಬಿಟ್ಟಿದ್ದಾರೆ. ಅಹಿಂದದಲ್ಲಿ ಅ-ಅಲ್ಪಸಂಖ್ಯಾತ, ದ-ದಲಿತ ಹೋಗಿದೆ. ಉಳಿದಿರೋದು ಹಿಂದುಳಿದ ಅನ್ನೋದು, ಅದು ಯಾವಾಗ ಹೋಗುತ್ತದೆ ಗೊತ್ತಿಲ್ಲ. ಸಂಪೂರ್ಣ ಅಹಿಂದ ಛಿದ್ರಗೊಳ್ಳುತ್ತದೆಯೋ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಇಡಿ ದಾಳಿ ಬಗ್ಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಮಾನದಂಡದ ಮೇಲೆ ರೇಡ್ ಮಾಡ್ತಾರೆ. ಸರ್ಕಾರ ಹೇಳಿದಂತೆ ಕೇಳಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಹೀಗಿರುವಾಗ ಇಡಿ ಅವರು ರಾಜಕೀಯ ಪಕ್ಷ, ಸರ್ಕಾರ ಹೇಳುವಂತೆ ರೇಡ್ ಮಾಡಲ್ಲ. ರಾಜ್ಯದಲ್ಲಿ ರಾಜ್ಯ ಸರ್ಕಾರ ಹಲವಾರು ಕೇಸ್ಗೆ ಸಂಬಂಧಿಸಿದಂತೆ ಎಸ್ಐಟಿ ರಚನೆ ಮಾಡಿದ್ದಾರೆ.
ಆಗ ರಾಜ್ಯ ಸರ್ಕಾರದ ಪಾತ್ರ ಏನಿತ್ತು ಅಂತ ಹೇಳಿದ್ವಾ? ಎಸ್ಐಟಿ ರಚನೆಯಾದಾಗ ಪಕ್ಷಪಾತ ಮಾಡದೇ ತನಿಖೆ ಆಗಲಿ ಅನ್ನೋದು ಆಶಯವಾಗಿತ್ತು. ಇಡಿಗೆ ಮಾಹಿತಿ ಇರುತ್ತದೆ, ಹೀಗಾಗಿ ಪ್ರಕರಣ ಬೆಳಕಿಗೆ ಬಂದಿರುತ್ತದೆ. ರಾಜಕೀಯ ಬಣ್ಣ ಕಟ್ಟಿ ದಿಕ್ಕು ತಪ್ಪಿಸುವ ಅವಶ್ಯಕತೆ ಇಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೆರರೆಸ್ಟ್ ಅಂತ ಕರೆದ ಬಗ್ಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಹಿರಿಯರು ಸಂಸ್ಕಾರದಿಂದ ಸಂಯಮದಿಂದ ವರ್ತನೆ ಮಾಡಬೇಕು.
ಇದು ಯುವಕರಿಗೆ ದಾರಿದೀಪ ಆಗುತ್ತದೆ. ಖರ್ಗೆ ಅವರು ವೈಯಕ್ತಿಕ ಹೇಳಿಕೆ ನೀಡಿ ನಿಂದನೆ ಮಾಡಿದ್ದಾರೆ. ಖರ್ಗೆಯವರು ರಾಜಕೀಯದಲ್ಲಿ ಅನುಭವಿಗಳಿದ್ದಾರೆ. ಮೋದಿ ಅವರನ್ನು ವೈಯಕ್ತಿಕವಾಗಿ ನಿಂದನೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಷಯಾಧಾರಿತ ಚರ್ಚೆಗೆ ಅವಕಾಶ ಇದೆ. ಈ ರೀತಿ ಹೇಳಿಕೆ ಕೊಡುವುದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಆಕ್ಷೇಪಿಸಿದರು.














