ಮೈಸೂರು : ಯುವಕನನ್ನು ಅಪಹರಣ ಮಾಡಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಮಾಡಿಸಿದ್ದಾರೆ ಎಂದು ಮೈಸೂರಿನ ಲಷ್ಕರ್ ಠಾಣೆಗೆ ನೊಂದ ಯುವಕ ದೂರು ನೀಡಿದ್ದಾರೆ. ಅನಿಲ್ ಕುಮಾರ್ ಅಲಿಯಾಸ್ ಅಕ್ಷತಾ ಎಂಬುವವರೇ ನೊಂದ ಯುವಕ ಎಂದು ತಿಳಿದುಬಂದಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್, 4 ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ, ಮಂಗಳಮುಖಿ ಅನಿತಾ ಮತ್ತು ತಂಡ ಅನಿಲ್ ಕುಮಾರ್ ಗೆ ಪರಿಚಯವಾಗಿದೆ. ಅನಿಲ್ ಕುಮಾರ್ ಗೆ ಮುಸುಕು ಹಾಕಿ ಬಲವಂತವಾಗಿ ಕಿಡ್ನಾಪ್ ಮಾಡಿ ಮಂಗಳೂರಿಗೆ ಕರೆದೊಯ್ದಿದ್ದರು ಎಂದು ಆರೋಪಿಸಲಾಗಿದೆ.
ಅನಿಲ್ ಕುಮಾರ್ಗೆ ಬಲವಂತವಾಗಿ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬೊಟ್ಟು ಹಾಕಿ ಮಂಗಳಮುಖಿಯಂತೆ ವೇಷ ಹಾಕಿಸಿ ಬಲವಂತವಾಗಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ. ಪ್ರತಿದಿನ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಸಿ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್ಲೋಡ್ ಮಾಡಿದ್ದಾರೆ.
ಅಲ್ಲದೇ ಮಂಗಳೂರು, ಕೇರಳ ಭಾಗಗಳಿಗೆ ಕಳಿಸಿ ಸೆಕ್ಸ್ ವರ್ಕ್ಗೆ ಬಳಕೆ ಮಾಡಿದ್ದಾರೆ. ಆಧಾರ್ ಕಾರ್ಡ್ನಲ್ಲಿ ಟ್ರಾನ್ಸ್ಜೆಂಟರ್ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸಹ ಅಧಿಕೃತ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಕನ್ವರ್ಟ್ ಮಾಡಲು ಸ್ಕೆಚ್ ಹಾಕಿದ್ರು. ಈ ಮಾಹಿತಿ ಅರಿತ ಅನಿಲ್ ಕುಮಾರ್ ಕರಾಳ ದಂಧೆಯ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆ 3 ಲಕ್ಷ ಕೊಡುವಂತೆ ಕೇಳಿದಾಗ ಮಂಗಳ ಮುಖಿ ಅನಿತಾ ಉಲ್ಟಾ ಹೊಡೆದಿದ್ದಾರೆ.
ನಂತರ ತನ್ನ ಮನೆಯಿಂದ 5 ಲಕ್ಷ ನಗದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ಕಂಪ್ಲೆಂಟ್ ದಾಖಲಿಸಿ ಜೈಲಿಗೆ ಹಾಕಿಸುತ್ತೇನೆಂದು ಅನಿತಾ ಬೆದರಿಕೆ ಹಾಕಿದ್ದಾರೆ. ಮನನೊಂದ ಅನಿಲ್ ಕುಮಾರ್ ದಾಖಲೆಗಳು ಸರ್ಟಿಫಿಕೇಟ್ ಸಮೇತ ಮಂಗಳೂರು ತೊರೆದು ನಂಜನಗೂಡು ಸೇರಿಕೊಂಡಿದ್ದಾನೆ. ಮತ್ತೆ ದಂಧೆ ಮಾಡಿಸಲು ಹವಣಿಸಿದ ಅನಿತಾ ಮಂಗಳಮುಖಿಯರನ್ನ ಅನಿಲ್ ಕುಮಾರ್ ಮನೆಗೆ ಕಳಿಸಿ ಗಲಾಟೆ ಮಾಡಿಸಿದ್ದಾರೆ. ಹೀಗಾಗಿ ಅನಿಲ್ ಕುಮಾರ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.















