ಮುಂಬೈ : ಯಾವುದು ವರ್ಕೌಟ್ ಆಗ್ತಿಲ್ಲ, ತುರ್ತಾಗಿ ಬೇರೆ ಪ್ಲ್ಯಾನ್ಗಳ ಯೋಚನೆ ಅಗತ್ಯವಿದೆ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಭಾನುವಾರ (ಏ.12) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಮುಂಬೈ ತಂಡ 18 ರನ್ಗಳ ಅಂತರದಿಂದ ಸೋಲನುಭವಿಸಿತು. ಈ ಮೂಲಕ ಐಪಿಎಲ್ 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಹ್ರ್ಯಾಟಿಕ್ ಸೋಲುಂಡಿದೆ.
ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಮಾತನಾಡಿ, ಯಾವುದೂ ವರ್ಕೌಟ್ ಆಗ್ತಿಲ್ಲ. ತುರ್ತಾಗಿ ಬೇರೆ ಪ್ಲ್ಯಾನ್ಗಳ ಯೋಚನೆ ಅಗತ್ಯವಿದೆ. ತಂಡಕ್ಕೆ ಆತ್ಮಾವಲೋಕನದ ಅವಶ್ಯಕತೆಯಿದ್ದು, ಆಟದ ವೇಗ ಹೆಚ್ಚಿಸಿಕೊಳ್ಳಬೇಕಿದೆ. ಪಂದ್ಯದಲ್ಲಿ ಕ್ಯಾಚ್ ಅಪ್ ಮಾಡುವುದು ವರ್ಕೌಟ್ ಆಗಲ್ಲ. ಬದಲಿಗೆ ಆಟದ ವೇಗ ಆರಂಭದಿಂದಲೇ ಚುರುಕಾಗಿರಬೇಕು. ನಾವು ಆಟವನ್ನು ಮುನ್ನಡೆಸುವ ಬದಲು ಹಿಡಿತ ಸಾಧಿಸುತ್ತಿದ್ದೇವೆ ಎಂದಿದ್ದಾರೆ.
ಈ ಪಂದ್ಯದ ಬಳಿಕ ನಮಗೆ ಒಂದೆರಡು ದಿನಗಳ ವಿರಾಮ ಇದೆ. ನಿಜಕ್ಕೂ ಬಹಳಷ್ಟು ವಿಷಯಗಳ ಬಗ್ಗೆ ಪುನರ್ವಿಮರ್ಶೆ ಮಾಡಬೇಕಿದೆ. ಆಡಿದ ಪಂದ್ಯಗಳ ಪೈಕಿ ಒಂದೆರಡು ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದೇವೆ, ಇದರ ಹೊರತಾಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಏನೆಲ್ಲಾ ಬದಲಾವಣೆ ತರಬೇಕು ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಪವರ್ಪ್ಲೇ ಓವರ್ಗಳ ಮೇಲೆ ಹೆಚ್ಚಿನ ಗಮನ ಹರಿಸಿ ಬ್ಯಾಟಿಂಗ್ ಮತ್ತು ಬೌಲಿಂಗ್ ಸುಧಾರಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ನಾವು ಇನ್ನೂ ಉತ್ತಮವಾಗಿ ಆಡಬೇಕು. ಟಾಸ್ ಏನಾದರೂ ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಚೆನ್ನಾಗಿ ಮಾಡಿದರೆ ಆಟವೂ ಚೆನ್ನಾಗಿರುತ್ತದೆ. ಮುಂದಿನ ಪಂದ್ಯದಲ್ಲಿ ಯಾವ ರೀತಿ ಆಡಬೇಕು ಎನ್ನುವ ಬಗ್ಗೆ ಯೋಚಿಸುತ್ತೇವೆ. ರುದರ್ಫೋರ್ಡ್ ಬ್ಯಾಟಿಂಗ್ ಹೇಗೆ ತಂಡಕ್ಕೆ ಬಲನೀಡುತ್ತದೆ. ಹಾಗೆಯೇ ಬೇರೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದರೆ, ಇತ್ತ ಆರ್ಸಿಬಿ ನಾಲ್ಕು ಪಂದ್ಯಗಳ ಪೈಕಿ ಮೂರು ಗೆಲುವುಗಳೊಂದಿಗೆ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಮುಂಬೈ ಪವರ್ಪ್ಲೇನಲ್ಲಿ ಉತ್ತಮ ಆರಂಭವನ್ನೇ ಪಡೆದಿತ್ತು. ರಯಾನ್ ರಿಕಲ್ಟನ್ – ರೋಹಿತ್ ಜೋಡಿ ಅಬ್ಬರಿಸಲು ಶುರು ಮಾಡಿದ್ರು.
ಆದ್ರೆ 13 ಎಸೆತಗಳಲ್ಲಿ 19 ರನ್ ಗಳಿಸಿದ್ದ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದ ಹೊರನಡೆದರು. ಈ ಬೆನ್ನಲ್ಲೇ 22 ಎಸೆತಗಳಲ್ಲಿ 37 ರನ್ ಗಳಿಸಿದ್ದ ರಿಕಲ್ಟನ್ ಕೂಡ ಪೆವಿಲಿಯನ್ಗೆ ಮರಳಿದ್ರು. ಅದೇ ಓವರ್ನಲ್ಲಿ ಬೌಂಡರಿ ಸಿಡಿಸಲು ಯತ್ನಿಸಿದ ತಿಲಕ್ ವರ್ಮಾ ಕ್ಯಾಚ್ ನೀಡಿ ಔಟಾದರು. ಇದು ರನ್ ವೇಗಕ್ಕೂ ಹೊಡೆತ ಬಿದ್ದಿತು.














