ಧಾರವಾಡ : ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಜಯಂತಿ ದಿನವಾದ ಇಂದು ಧಾರವಾಡದ ಜಯನಗರದಲ್ಲಿ ಪ್ರತಿಭಟನೆ ನಡೆಸಿದ ಉದ್ಯೋಗಾಕಾಂಕ್ಷಿಗಳನ್ನ ಪೊಲೀಸರು ವಶಕ್ಕೆ ಪಡೆದ್ದಾರೆ.
ಸಮಾನ ಮನಸ್ಕರ ತಂಡ, ರೈತ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಪೊಲೀಸರ ಅನುಮತಿಯನ್ನೂ ಕೇಳಿದ್ದರು. ಅಂಬೇಡ್ಕರ್ ಜಯಂತಿ ಹಿನ್ನೆಲೆ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ.
ಹೀಗಿದ್ದರೂ ಅನೇಕರು ಧಾರವಾಡದ ಜಯನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಪೊಲೀಸರು ಹಲವು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು ಕರೆದೊಯ್ದರು. ಇದರಿಂದ ಕೆರಳಿದ ಉದ್ಯೋಗಾಕಾಂಕ್ಷಿಗಳು ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಹೋರಾಟವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪೊಲೀಸರು ಬಂಧಿಸಿ ಕರೆದೊಯ್ದವರನ್ನ ಕೂಡಲೇ ಬಿಡುಗಡೆ ಮಾಡಬೇಕು. ಸಂವಿಧಾನ ಕೊಟ್ಟ ಅಂಬೇಡ್ಕರ್ ದಿನಾಚರಣೆಯಂದೇ ನಮ್ಮ ಹಕ್ಕು ಕೇಳುವುದು ತಪ್ಪಾ? ಬ್ರಿಟೀಷರ ಕಾಲವೇ ಉತ್ತಮವಾಗಿತ್ತು. ಆಗ ಪ್ರತಿಭಟನೆ ಮಾಡಲು ಯಾವುದೇ ಅನುಮತಿ ಬೇಕಾಗಿರಲಿಲ್ಲ. ಈಗ ಪ್ರತಿಭಟನೆ ಮಾಡಲು ಅನುಮತಿ ಕೇಳುವ ಕಾಲ ಬಂದಿದೆ ಎಂದು ಮಹಿಳಾ ಉದ್ಯೋಗಾಕಾಂಕ್ಷಿಯೊಬ್ಬರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ರು.















